ನವದೆಹಲಿ, ನ.18: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿದ್ದರೂ ಶ್ರೀಶಾಂತ್ ಗೆ ತೊಂದರೆ ತಪ್ಪಿಲ್ಲ. ಒಂದು ಕಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಬಿಸಿಸಿಐ ಅಡ್ಡಗಾಲು ಹಾಕಿದ್ದರೆ, ಇನ್ನೊಂದೆಡೆ ದೆಹಲಿ ಪೊಲೀಸರ ಮನವಿ ಮೇರೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ದೆಹಲಿ ಹೈಕೋರ್ಟಿನ ಜಸ್ಟೀಸ್ ಸಿದ್ದಾರ್ಥ್ ಮೃದುಲ್ ಅವರು ಶ್ರೀಶಾಂತ್ ಸೇರಿದಂತೆ 36ಜನ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.[ಸ್ಪಾಟ್ ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ]
ಶ್ರೀಶಾಂತ್, ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚಾವಣ್ ಹಾಗೂ 33 ಜನರಿಗೆ ಜುಲೈ 25ರಂದು ಕ್ಲೀನ್ ಚಿಟ್ ಸಿಕ್ಕಿದೆ.ಆದರೆ, ಈಗ ಹೈಕೋರ್ಟ್ ನೀಡಿರುವ ಹೊಸ ನೋಟಿಸ್ ಗೆ ಉತ್ತರಿಸಲು ಡಿಸೆಂಬರ್ 16ರ ತನಕ ಗಡುವು ನೀಡಲಾಗಿದೆ.
ಮಹಾರಾಷ್ಟ್ರದ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ (MCOCA) ಕಾಯ್ಡೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅಗತ್ಯವಾಗಿ ಬೇಕಾದ ದಾಖಲೆಗಳನ್ನು ಒದಗಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೂ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಗೂ ಸಂಬಂಧ ಇರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಸಂದೀಪ್ ಎಂಬ ಬುಕ್ಕಿ, ಜಾವೇದ್ ಚೌಟನಿ, ಸಲ್ಮಾನ್ ಹಾಗೂ ಎತೆಶಾಮ್ ಮುಂತಾದ ಪಾಕಿಸ್ತಾನಿಗಳ ನೆರವು ಪಡೆದು ಡಿ ಗ್ಯಾಂಗ್ ಜೊತೆ ಸಂದೀಪ್ ಸಂಪರ್ಕ ಬೆಳೆಸಿದ್ದ ಎಂದು ಪೊಲೀಸರು ವಾದಿಸಿದ್ದಾರೆ.
ಮೋಕಾ ಕಾಯ್ದೆ ಅಡಿ ಪ್ರಕರಣ ಅಲ್ಲದೆ, ಐಪಿಸಿ ಸೆಕ್ಷನ್ 120 ಬಿ, 419 ಹಾಗೂ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಮಾರು 6,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.