ಧರ್ಮಶಾಲಾ, ಮಾರ್ಚ್ 08: ಧರ್ಮಶಾಲಾದ ಹಸಿರು ಅಂಗಳದಲ್ಲಿ ಇಂದು ನಡೆಯುತ್ತಿರುವ ಧೆವದರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕವು ಭಾರತ ಬಿ ತಂಡಕ್ಕೆ ಗೆಲ್ಲಲು 280 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜ್ಯ ಆರಂಭಿಕ ಕುಸಿತ ಕಂಡು ಸಂಕಷ್ಟದಲ್ಲಿತ್ತು. ಒಂದು ಹಂತದಲ್ಲಿ 15 ಓವರ್ನಲ್ಲಿ 64 ರನ್ಗೆ ನಾಲ್ಕು ಜನ ಪ್ರಮುಖ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿದ್ದರು.
ಆದರೆ ಜವಾಬ್ದಾರಿಯುತ ಆಟವಾಡಿದ ಆರ್.ಸಮರ್ಥ್ ಶತಕ ಬಾರಿಸಿ ಕುಸಿತದ ಹಾದಿ ಹಿಡಿದಿದ್ದ ತಂಡಕ್ಕೆ ಆಸರೆಯಾಗಿ ಉತ್ತಮ ಸ್ಕೋರ್ ಗಳಿಸಲು ಸಹಾಯ ಮಾಡಿದರು. 107 ರನ್ ಗಳಿಸಿದ ಅವರು 8 ಬೌಂಟರಿ ಮತ್ತು 1 ಸಿಕ್ಸರ್ ಭಾರಿಸಿದರು. ಈ ಟೂರ್ನಿಯಲ್ಲಿ ಎರಡು ಶತಕ ಒಂದು ಅರ್ಧ ಶತಕವನ್ನು ಸಮರ್ಥ್ ಗಳಿಸಿದ್ದಾರೆ.
ಆರ್.ಸಮರ್ಥ್ಗೆ ಅತ್ಯುತ್ತಮ ಸಾಥ್ ನಿಡಿದ ವಿಕೆಟ್ ಕೀಪರ್ ಗೌಥಮ್ 84 ಎಸೆತದಲ್ಲಿ 76 ರನ್ ಗಳಿಸಿದರು. ಅವರು 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಕೊನೆಯಲ್ಲಿ ಬಂದ ಶ್ರೇಯಸ್ ಗೋಪಾಲ್ 22 ಎಸೆತದಲ್ಲಿ 33 ರನ್ ಗಳಿಸಿ ಮಿಂಚಿದರು.
ಉತ್ತಮ ಬೌಲಿಂಗ್ ದಾಳಿ ನಡೆಸಿದ ಭಾರತ ಬಿ ತಂಡದ ಖಲೀಲ್ ಅಹ್ಮದ್ ಅವರು 3 ವಿಕೆಟ್ ಗಳಿಸಿದರು. ಉಮೇಶ್ ಯಾದವ್ 2 ವಿಕೆಟ್ ಮತ್ತು ಜಯಂತ್ ಯಾದವ್ 1 ವಿಕೆಟ್ ಗಳಿಸಿದರು. ಭಾರತ ಬಿ ದೇವಧರ್ ಟ್ರೋಫಿ ಗೆಲ್ಲಲು 280 ರನ್ ಗಳಿಸಬೇಕಿದೆ.