
ನವದೆಹಲಿ: ಟೀಮ್ ಇಂಡಿಯಾದ ಅನುಭವಿ ಆಟಗಾರರು ಮತ್ತು ಸಿಬ್ಬಂದಿಯ ಮಧ್ಯೆ ಅಗತ್ಯಕ್ಕೆ ಬೇಕಿದ್ದಷ್ಟು ಮಟ್ಟಿನ ಸಂವಹನ ನಡೆಯುತ್ತಿಲ್ಲ ಎಂದು ಭಾರತದ ಮಾಜಿ ವೇಗಿ, ಸದ್ಯ ಕ್ರಿಕೆಟ್ ಸಲಹಾ ಸಮಿತಿಯಲ್ಲಿರುವ (ಸಿಎಸಿ) ಮದನ್ ಲಾಲ್ ಮಂಗಳವಾರ (ಡಿಸೆಂಬರ್ 1) ಹೇಳಿದ್ದಾರೆ.
ಭಾರತದ ಪ್ರಮುಖ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರನ್ನುದ್ದೇಶಿಸಿ ಮದನ್ ಲಾಲ್ ಈ ಹೇಳಿಕೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸ್ನಾಯು ಸೆಳೆತಕ್ಕೆ (ಹ್ಯಾಮ್ಸ್ಟ್ರಿಂಗ್) ಒಳಗಾಗಿದ್ದರು. ಆದರೆ 2 ವಾರ ವಿಶ್ರಾಂತಿ ತೆಗೆದುಕೊಳ್ಳಿ ಎಂದರೂ ಶರ್ಮಾ ವಿಶ್ರಾಂತಿ ತೆಗೆದುಕೊಳ್ಳದೆ 3 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದರು.
ಐಪಿಎಲ್ ಬಳಿಕ ರೋಹಿತ್ ಅವರು ಟೀಮ್ ಇಂಡಿಯಾದ ಜೊತೆಗೆ ಆಸ್ಟ್ರೇಲಿಯಾಕ್ಕೆ ತೆರಳದೆ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಚೇತರಿಕೆಗಾಗಿ ಬಂದಿದ್ದರು. ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡಗಳು ಪ್ರಕಟಗೊಂಡಾಗ ಅದರಲ್ಲಿ ಲಿಮಿಟೆಡ್ ಓವರ್ಗಳ ಕ್ರಿಕೆಟ್ನಲ್ಲಿ ತನ್ನ ಹೆಸರು ಇಲ್ಲದ್ದಕ್ಕೆ ಬೇಜಾರಾಗಿ ರೋಹಿತ್ ತಂಡ ಸಮಿತಿ ನೀಡಿದ್ದ ಸಲಹೆ ದಿಕ್ಕರಿಸಿದ್ದರೋ ಗೊತ್ತಿಲ್ಲ.
ಈ ವಿವಾದದ ಬಗ್ಗೆ ಮಾತನಾಡಿರುವ ಮದನ್ ಲಾಲ್, 'ರೋಹಿತ್ ಆವತ್ತು 70 ಶೇ. ಫಿಟ್ ಇದ್ದರೂ ಐಪಿಎಲ್ನಲ್ಲಿ ಪಂದ್ಯಗಳನ್ನು ಆಡಿದ್ದೇಕೆ ಅನ್ನೋದಕ್ಕೆ ಎಂಐ ಮತ್ತು ರೋಹಿತ್ ಅವರೇ ಉತ್ತರಿಸಬೇಕು. ಬಹುಶಃ ಅಲ್ಲಿ ಒಳ್ಳೆಯ ಸಂವಹನ ಇತ್ತನ್ನಿಸುತ್ತೆ. ಆದರೆ ಅದೇ ರೀತಿಯ ಅಗತ್ಯ ಸಂವಹನ ಭಾರತ ತಂಡದಲ್ಲಿ ನಡೆಯುತ್ತಿಲ್ಲ,' ಎಂದಿದ್ದಾರೆ.