ಟೀಮ್ ಇಂಡಿಯಾ ಪರ ಆಡುವ ಕನಸು ಕಾಣುತ್ತಿರುವ ಅದೆಷ್ಟೋ ಆಟಗಾರರು ನಮ್ಮ ಕಣ್ಣ ಮುಂದೆ ಕಾಣಿಸುತ್ತಾರೆ. ಅವರಿಗೆ ಲಕ್ ಎನ್ನುವುದು ಕೈ ಹಿಡಿದಿರುವುದಿಲ್ಲ. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಯಶಸ್ಸಿನ ಮಹಲ್ ಏರಿರುವ ಕರ್ನಾಟಕದ ಸ್ಟಾರ್ ಪ್ಲೇಯರ್ ಒಬ್ಬ ಈಗ ಟೀಮ್ ಇಂಡಿಯಾದ ಟೆಸ್ಟ್ ಜೆರ್ಸಿ ತೊಡುವ ಕನಸಿನಲ್ಲಿದ್ದಾರೆ.
ದೇಶೀಯ ಟೂರ್ನಿಗಳಲ್ಲಿ ತನ್ನದೇ ಆದ ಛಾಪೂ ಮೂಡಿಸಿದ ಆಟಗಾರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಭರ್ಜರಿ ಬ್ಯಾಟಿಂಗ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದೆ. ಮೊದಲು ರಣಜಿ ತಂಡದಲ್ಲಿ ಸ್ಥಾನ ಗಟ್ಟಿ ಗಳಿಸಿಕೊಂಡ ಪ್ಲೇಯರ್ ಕ್ರಮೇಣವಾಗಿ, ಟೀಮ್ ಇಂಡಿಯಾದ ಕದ ತಟ್ಟುತ್ತಾ ಬಂದರು. ಅಂದಹಾಗೆ ಈಗಾಗಲೇ ಟೀಮ್ ಇಂಡಿಯಾ ಪರ ಟಿ20 ಪಂದ್ಯವನ್ನು ಆಡಿರುವ ದೇವದತ್ ಪಡಿಕ್ಕಲ್, ಟೆಸ್ಟ್ಗೆ ಪದಾರ್ಪಣೆ ಮಾಡುವ ಕನಸಿನಲ್ಲಿದ್ದಾರೆ.

ದೇವದತ್ ಪಡಿಕ್ಕಲ್ ಹೆಸರು ಕೇಳಿದರೆ ಸಾಕು ಅವರ ಬ್ಯಾಟಿಂಗ್ ಶೈಲಿ ಕಣ್ಣು ಮುಂದೆ ಬಾರದೇ ಇರದು. ಅದರಲ್ಲೂ ಕೋವಿಡ್-19 ಸಮಯದಲ್ಲಿ ದುಬೈನಲ್ಲಿ ನಡೆದ ಐಪಿಎಲ್ನಲ್ಲಿ ಆರ್ಸಿಬಿ ಪರ ಬ್ಯಾಟ್ ಹಿಡಿದು ಅಂಗಳಕ್ಕೆ ಪ್ರವೇಶಿಸಿದ ಪೋರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದರು. ಇವರ ಭರ್ಜರಿ ಆಟಕ್ಕೆ ಅಭಿಮಾನಿಗಳು ಮನಸೋತಿದ್ದರು. ಇವರ ಸೊಗಸಾದ ಆಟದ ಪರಿಣಾಮ ಅವಕಾಶಗಳು ಹೆಚ್ಚಾಗಿ ಸಿಕ್ಕವು.
ಎರಡು ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಬ್ಯಾಟ್ ಮಾಡಿರುವ ದೇವದತ್ ಪಡಿಕ್ಕಲ್, ರಾಜಸ್ಥಾನ ರಾಯಲ್ಸ್ ತಂಡ ಸೇರಿದರು. ಈ ಬಾರಿ ಅವರು ಕನ್ನಡಿಗ ಕೆಎಲ್ ರಾಹುಲ್ ಮುಂದಾಳತ್ವದ ಲಕ್ನೋ ಸೂಪರ್ ಜೇಂಟ್ಸ್ ಪರ ಆಡಲಿದ್ದಾರೆ. ಪ್ರಸಕ್ತ ವರ್ಷವಂತೂ ದೇವದತ್ ಪಡಿಕ್ಕಲ್ ಅವರಿಗೆ ಸ್ಮರಣೀಯ..

ಧರ್ಮಶಾಲಾ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಡುವ 11 ರಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆಡುವ 11ಕ್ಕೆ ಮರಳಬಹುದು. ಅದೇ ಸಮಯದಲ್ಲಿ, ಈ ಸರಣಿಯಲ್ಲಿ ಇದುವರೆಗೆ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ರಜತ್ ಪಾಟಿದಾರ್ ಬದಲಿಗೆ ದೇವದತ್ ಪಡಿಕ್ಕಲ್ ಆಡುವ ಅವಕಾಶವನ್ನು ಪಡೆಯಬಹುದು. ದೇವದತ್ ಪಡಿಕ್ಕಲ್ ಆಡುವ 11ರೊಳಗೆ ಸೇರ್ಪಡೆಗೊಂಡರೆ, ಇದು ಅವರ ಚೊಚ್ಚಲ ಟೆಸ್ಟ್ ಆಗಲಿದೆ ಮತ್ತು ಇದರೊಂದಿಗೆ ಭಾರತೀಯ ಕ್ರಿಕೆಟ್ನ 24 ವರ್ಷಗಳ ಹಳೆಯ ದಾಖಲೆಯೂ ಮುರಿಯಲಿದೆ.
ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದರೆ, ಈ ಸರಣಿಯಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ 5ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 2000ನೇ ಇಸವಿಯಲ್ಲಿ ತವರಿನಲ್ಲಿ ನಡೆದ ಇದೇ ಸರಣಿಯಲ್ಲಿ 4 ಆಟಗಾರರು ಭಾರತ ಪರ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು.
2000ನೇ ಇಸವಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಿತು. ಮುರಳಿ ಕಾರ್ತಿಕ್, ವಾಸಿಂ ಜಾಫರ್, ಮೊಹಮ್ಮದ್ ಕೈಫ್ ಮತ್ತು ನಿಖಿಲ್ ಚೋಪ್ರಾ ಈ ಸರಣಿಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು.