ಏಪ್ರಿಲ್ 5ರಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ನಂತರ ಅಭಿಮಾನಿಗಳು ಆರ್ಸಿಬಿ ಮಾಜಿ ಬ್ಯಾಟರ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಹೌದು, ಆರ್ಸಿಬಿ ಮಾಜಿ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ನಿಧಾನಗತಿಯ ಬ್ಯಾಟಿಂಗ್ಗಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅವರ ಇನ್ನಿಂಗ್ಸ್ ಅನ್ನು ನಿರ್ದಯವಾಗಿ ಟ್ರೋಲ್ ಮಾಡಲಾಗುತ್ತಿದೆ.
ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 5 ರನ್ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. ಶಿಖರ್ ಧವನ್ ಅಜೇಯ 86 ರನ್ ಗಳಿಸಿದರೆ, ಪ್ರಭ್ಸಿಮ್ರಾನ್ ಸಿಂಗ್ 60 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ವಿಕೆಟ್ ಕಳೆದುಕೊಂಡರೂ ಉತ್ತಮ ಆರಂಭ ಪಡೆಯಿತು. 5.4 ಓವರ್ ಗಳಲ್ಲಿ 57 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟಿಂಗ್ಗೆ ಬಂದ ದೇವದತ್ ಪಡಿಕ್ಕಲ್ ಪ್ರತಿಯೊಂದು ರನ್ ಗಳಿಸಲು ಸಾಕಷ್ಟು ಪರದಾಡಿದರು. ಒಂದೆಡೆ ಸಂಜು ಸ್ಯಾಮ್ಸನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರೆ, ಮತ್ತೊಂದು ಬದಿಯಲ್ಲಿ ಪಡಿಕ್ಕಲ್ ಹೆಣಗಾಡಿದರು.
ಇದರಿಂದ ಸ್ಕೋರ್ ಬೋರ್ಡ್ ಒತ್ತಡಕ್ಕೆ ಒಳಗಾದ ಸಂಜು ಸ್ಯಾಮ್ಸನ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಸಂಜು ಸ್ಯಾಮ್ಸನ್ 25 ಎಸೆತಗಳಲ್ಲಿ 42 ರನ್ ಗಳಿಸಿದರು. ನಂತರ ಬಂದ ರಿಯಾನ್ ಪರಾಗ್ ಕೂಡ ವೇಗವಾಗಿ ರನ್ ಗಳಿಸಿದರು, 12 ಎಸೆತಗಳಲ್ಲಿ 1 ಬೌಂಡರಿ ಎರಡು ಸಿಕ್ಸರ್ ಸಹಿತ 20 ರನ್ ಗಳಿಸಿ ಔಟಾದರು. ಆದರೂ ಪಡಿಕ್ಕಲ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಲಿಲ್ಲ.
26 ಎಸೆತಗಳಲ್ಲಿ ಕೇವಲ 21 ರನ್ ಗಳಿಸಿದ ಪಡಿಕ್ಕಲ್ ಗಳಿಸಿದ್ದು ಕೇವಲ ಒಂದು ಬೌಂಡರಿ ಮಾತ್ರ. ನಾಥನ್ ಎಲ್ಲಿಸ್ ಅವರ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಶಿಮ್ರಾನ್ ಹೆಟ್ಮೆಯರ್ (36) ಮತ್ತು ಧ್ರುವ್ ಜುರೆಲ್ (32*) ಅವರ ಅಮೋಘ ಆಟದ ಹೊರತಾಗಿಯೂ ರಾಜಸ್ಥಾನ 5 ರನ್ಗಳಿಂದ ಸೋಲನುಭವಿಸಿತು.

ಆತನನ್ನು ಕೈಬಿಟ್ಟು ಆರ್ಸಿಬಿಯ ಒಳ್ಳೆ ಕೆಲಸ ಮಾಡಿದೆ!
ಪಡಿಕ್ಕಲ್ ಇನ್ನಿಂಗ್ಸ್ ನೋಡಿದ ಅಭಿಮಾನಿಗಳು ತಲೆ ಚಚ್ಚಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಬಗೆ ಬಗೆಯಲ್ಲಿ ಟ್ರೋಲ್ ಮಾಡಿದ್ದಾರೆ. ಒಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, "ಪಡಿಕ್ಕಲ್ರನ್ನು ತಂಡದಿಂದ ಕೈ ಬಿಟ್ಟದ್ದು ಆರ್ಸಿಬಿಯ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು" ಎಂದು ಹೇಳಿದ್ದಾರೆ. ಮತ್ತೊಬ್ಬರು ಪಡಿಕ್ಕಲ್ ಅವರನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ಗೆ ಹೋಲಿಕೆ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು "ಆಟಗಾರರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಯೋಜನೆ ಇಲ್ಲದೆ, ತಂಡದಲ್ಲಿ ಉಳಿಸಿಕೊಂಡರೆ ಹೀಗೆ ಆಗುತ್ತದೆ. ದೇವದತ್ ಪಡಿಕ್ಕಲ್ ಉತ್ತಮ ಆಟಗಾರ, ಆತನನ್ನು ಆರಂಭಿಕರಾಗಿ ಕಣಕ್ಕಿಳಿಸಬೇಕು" ಎಂದು ಹೇಳಿದ್ದಾರೆ. ಅನೇಕ ಅಭಿಮಾನಿಗಳು ಕೂಡ ಪಡಿಕ್ಕಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತ ಆರಂಭಿಕ ಆಟಗಾರನಾಗಿ ಯಶಸ್ವಿಯಾಗಿದ್ದಾಗ ಹೊಸದಾಗಿ ಬೇರೆ ಕ್ರಮಾಂಕದಲ್ಲಿ ಯಾಕೆ ಆಡಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಂತಹ ಕೆಲವು ಟ್ವೀಟ್ಗಳು ಇಲ್ಲಿವೆ.