ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದ ದೇವದತ್ ಪಡಿಕ್ಕಲ್ ದೇಶೀಯ ಟೂರ್ನಿಗೆ ಕಂ ಬ್ಯಾಕ್ ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬರೋಡಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇವದತ್ ಅಮೋಘ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ. ಇವರ ಸೊಗಸಾದ ಬ್ಯಾಟಿಂಗ್ ನೆರವಿನಿಂದಲೇ ಕರ್ನಾಟಕ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.
ವಡೋಧಾರದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಮೊದಲು ಬ್ಯಾಟ್ ಮಾಡಿ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 281 ರನ್ ಕಲೆ ಹಾಕಿತು.

ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಕರ್ನಾಟಕದ ಮಯಾಂಕ್ ಅಗರ್ ವಾಲ್ ಮಹತ್ವದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಇವರು 6 ರನ್ಗಳಿಗೆ ಆಟ ಮುಗಿಸಿದರು. ಆಗ ತಂಡದ ಮೊತ್ತ 30 ಆಗಿತ್ತು. ಎರಡನೇ ವಿಕೆಟ್ಗೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಜೊತೆ ಸೇರಿಕೊಂಡ ಕೆವಿ ಅನೀಶ್ ಜೋಡಿ ತಂಡಕ್ಕೆ ಉತ್ತಮ ಆರಂಭದ ಕಾಣಿಕೆ ನೀಡಿತು. ಈ ಜೋಡಿ ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿ, ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿತು. ಈ ಜೋಡಿ ಸುಮಾರು 22 ಓವರ್ಗಳ ವರೆಗೆ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿತು.
ಎರಡನೇ ವಿಕೆಟ್ಗೆ ದೇವದತ್ ಹಾಗೂ ಅನೀಶ್ ಜೋಡಿ 133 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಕೆವಿ ಅನೀಶ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿ ಔಟ್ ಆದರು.

ಕರ್ನಾಟಕ ತಂಡದ ಸ್ಟಾರ್ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 99 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್ ನೆರವಿನಿಂದ 102 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇದು ದೇವದತ್ ಪಡಿಕ್ಕಲ್ ಅವರ ಲೀಸ್ಟ್ ಎ ಪಂದ್ಯಗಳಲ್ಲಿ 9ನೇ ಶತಕವಾಗಿದೆ.
ಸ್ಮರಣ್ ಆರ್ 28, ಕೆಎಲ್ ಶ್ರೀಜೇತ್ 28, ಆಲ್ರೌಂಡರ್ ಅಭಿನವ್ ಮನೋಹರ್ 21, ಶ್ರೇಯಸ್ ಗೋಪಾಲ್ 16 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಬರೋಡಾ ತಂಡದ ಪರ ರಾಜ್ ಲಿಂಬಾನಿ 47 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅತಿತ್ ಸೇಠ ಸಹ ಮೂರು ವಿಕೆಟ್ ಪಡೆದು ಕರ್ನಾಟಕದ ಬೃಹತ್ ಮೊತ್ತದ ಆಸೆಗೆ ಕೊಳ್ಳೆ ಇಟ್ಟರು.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ 50 ಓವರ್ಗಳಲ್ಲಿ 6 ವಿಕೆಟ್ಗೆ 275 ರನ್ ಸಿಡಿಸಿತು. ಮಹಾರಾಷ್ಟ್ರ ತಂಡದ ಪರ ಅರ್ಶಿನ್ ಕುಲಕರ್ಣಿ 107 ರನ್ ಸಿಡಿಸಿದರು. ಅಂಕಿತ್ ಭಾವನೆ 60, ನಿಖಿಲ್ ನಾಯಕ್ 52 ರನ್ ಸಿಡಿಸಿದರು.