ನಾಯಕ ದೇವದತ್ ಪಡಿಕ್ಕಲ್ ಅವರ ಅಮೋಘ ಬ್ಯಾಟಿಂಗ್ ಹಾಗೂ ಭರವಸೆಯ ಆಟಗಾರ ಅಭಿನವ್ ಮನೋಹರ್ ಅವರ ಬಿರುಸಿನ ಆಟದ ಪರಿಣಾಮ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಮಹತ್ವದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 110 ರನ್ಗಳಿಂದ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.
ಮಂಗಳವಾರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಅಬ್ಬರಿಸಿತು. ಮೊದಲ ವಿಕೆಟ್ಗೆ ನಾಯಕ ದೇವದತ್ ಪಡಿಕ್ಕಲ್ ಹಾಗೂ ಮೊಹಮ್ಮದ್ ತಹಾ ಭರ್ಜರಿ ಆಟದ ಪ್ರದರ್ಶನ ನೀಡಿತು. ಈ ಜೋಡಿ ಮೊದಲ ವಿಕೆಟ್ಗೆ 10 ಓವರ್ಗಳಲ್ಲಿ 81 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಮೊಹಮ್ಮದ್ ತಹಾ 37 ರನ್ ಬಾರಿಸಿ ಔಟ್ ಆದರು.

ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದ ಅಭಿನವ್ ಮನೋಹರ್ ಅವರು ನಾಯಕ ದೇವದತ್ ಪಡಿಕ್ಕಲ್ ಅವರೊಂದಿಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊಡಿ ಡೆತ್ ಓವರ್ಗಳಲ್ಲಿ ಮಂಗಳೂರು ಬೌಲರ್ಗಳ ಹೆಡೆ ಮುರಿ ಕಟ್ಟಿತು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಕಾರಣವಾಯಿತು. ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಕೇವಲ 23 ಎಸೆತಗಳಲ್ಲಿ 50 ರನ್ ಬಾರಿಸಿದರು. ಇವರ ಅಮೋಘ ಇನಿಂಗ್ಸ್ನಲ್ಲಿ 5 ಬೌಂಡರಿ, 3 ಸಿಕ್ಸರ್ಗಳು ಸೇರಿವೆ.
ಐಪಿಎಲ್ನಲ್ಲಿ ಹಾಗೂ ಟೀಮ್ ಇಂಡಿಯಾ ಪರ ಆಡಿರುವ ಅನುಭವ ಹೊಂದಿರುವ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಕೇವಲ ಒಂದು ರನ್ಗಳಿಂದ ಶತಕ ವಂಚಿತರಾದ್ರು. ಇವರು 64 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 99 ರನ್ ಸಿಡಿಸಿ ತಂಡಕ್ಕೆ ಆಸರೆಯಾಯಿತು. ಮನೋಹರ್ ಕುಮಾರ್ 6 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 16 ರನ್ ಸಿಡಿಸಿದರು. ಅಂತಿಮವಾಗಿ ಹುಬ್ಬಳ್ಳಿ 20 ಓವರ್ಗಳಲ್ಲಿ 2 ವಿಕೆಟ್ಗೆ 210 ರನ್ ಸೇರಿಸಿತು.

ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಮಂಗಳೂರು ಡ್ರ್ಯಾಗನ್ಸ್ ತಂಡದ ಪರ ಯಾವೊಬ್ಬ ಬ್ಯಾಟರ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಮಂಗಳೂರು ಪರ ಲೋಚನ್ ಗೌಡ (14), ತಿಪ್ಪಾ ರೆಡ್ಡಿ (16), ಆನೀಶ್ ಕೆವಿ (28), ಆದರ್ಶ್ ಪ್ರಜ್ವಲ್ (17) ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಮಂಗಳೂರು ಕೇವಲ 16.1 ಓವರ್ಗಳಲ್ಲಿ 100 ರನ್ ಸಿಡಿಸಿ ಆಲೌಟ್ ಆಯಿತು. ಹುಬ್ಬಳ್ಳಿ ಪರ ರಿತೇಶ್ ಭಟ್ಕಳ್ 3, ಶ್ರೀಚ್ ಆಚರ್, ಕೆಸಿ ಕಾರ್ಯಪ್ಪ, ಯಶ್ ರಾಜ್ ತಲಾ 2 ವಿಕೆಟ್ ಕಬಳಿಸಿದರು. ಈ ಮೂಲಕ ಹುಬ್ಬಳ್ಳಿ ಟೈಗರ್ಸ್ ಫೈನಲ್ಗೆ ಪ್ರವೇಶಿಸಿತು.