

ನವದೆಹಲಿ, ಜನವರಿ 10: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಬೆಂಬಲಿಸಿದ್ದಾರೆ. ಮುಂಬರಲಿರುವ ವಿಶ್ವಕಪ್ ನಲ್ಲಿ ಧೋನಿ ಭಾರತ ತಂಡದ ಪರ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದಿದ್ದಾರೆ.
ಗುರುವಾರ (ಜನವರಿ 10) ಮಾತನಾಡುತ್ತ ರೋಹಿತ್, 'ಧೋನಿ ಉಪಸ್ಥಿತಿ ತಂಡಕ್ಕೆ ಶಾಂತತೆಯನ್ನು ಒದಗಿಸಲಿದೆ. ಮುಖ್ಯವಾಗಿ ತಂಡದಲ್ಲಿರುವ ಯುವಕರಿಗೆ ಮಾರ್ಗದರ್ಶನ ಲಭಿಸಲಿದೆ. ಅಷ್ಟೇ ಅಲ್ಲ, ಧೋನಿ 2019ರ ಮೇ 30ರಿಂದ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ' ಎಂದು ಹೇಳಿದರು.
ಆಸ್ಟ್ರೇಲಿಯಾ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಏಕದಿನ ತಂಡದಲ್ಲಿರುವ ಧೋನಿ ಬುಧವಾರ (ಜನವರಿ 9) ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನೆಟ್ ಅಭ್ಯಾಸ ನಡೆಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದರು. ಜನವರಿ 12ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.
ಮಹೇಂದ್ರ ಸಿಂಗ್ ಬಗ್ಗೆ ಮಾತನಾಡುತ್ತ ರೋಹಿತ್, 'ಬಹಳ ವರ್ಷಗಳ ಕಾಲ ಧೋನಿ ಭಾರತ ರಾಷ್ಟ್ರೀಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ತಂಡದ ಗೆಲುವಿನ ಯಶಸ್ವಿ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಮುಂದಿನ ವಿಶ್ವಕಪ್ನಲ್ಲೂ ಧೋನಿ ನಮ್ಮ ತಂಡದ ದಾರಿದೀಪವಾಗಿರಲಿದ್ದಾರೆ' ಎಂದರು.