ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇ ಆಫ್ ಲೆಕ್ಕಾಚಾರ ಆರಂಭವಾಗಿದೆ. ಈ ವೇಳೆ ಒಂದು ಸ್ಥಾನಕ್ಕಾಗಿ ಎರಡು ತಂಡಗಳು ಫೈಟ್ ನಡೆಸುತ್ತಿವೆ. ಪ್ಲೇ ಆಫ್ ರೇಸ್ನಲ್ಲಿದ್ದ ಎಲ್ಎಸ್ಜಿ ತಂಡ ಸೋಮವಾರ ಎಸ್ಆರ್ಎಚ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದೆ. ಆದರೆ ಈ ಪಂದ್ಯದಲ್ಲಿ ಯುವ ಸ್ಪಿನ್ ಬೌಲರ್ ದಿಗ್ವೇಶ್ ರಾಠಿ ಬಿಗುವಿನ ದಾಳಿ ನಡೆಸಿದ್ರು. ಆದರೆ ಇವರು ವಿಕೆಟ್ ಪಡೆದು ಸುದ್ದಿಯಲ್ಲಿ ಇರುವ ಬದಲು ತಮ್ಮ ಸೆಲೆಬ್ರೇಷನ್ ಹಾಗೂ ವಿವಾದದಿಂದ ಸುದ್ದಿಯಲ್ಲಿದ್ದಾರೆ.
ಶ್ರೀಮಂತ ಲೀಗ್ ಆರಂಭವಾದಗಲೇ ದಿಗ್ವೇಶ್ ರಾಠಿ ತಮ್ಮ ನೋಟ್ ಬುಕ್ ಸೆಲಬ್ರೇಷನ್ನಿಂದ ಎಲ್ಲರ ಚಿತ್ತ ಕದ್ದಿದ್ದರು. ಇವರ ಈ ಸಂಭ್ರಮಾಚರಣೆಗೆ ಬಿಸಿಸಿಐ ಆಗ ದಂಡವನ್ನು ವಿಧಿಸಿತ್ತು. ಆಗ ವೀಕ್ಷಕ ವಿವರಣೆ ಮಾಡುತ್ತಿದ್ದವರು ಇವರು ಹೀಗೆ ಮಾಡಿದ್ರೆ, ಲೀಗ್ ಮುಗಿಯುವದರೊಳಗೆ ಇವರ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಆಗುತ್ತದೆ ಎಂದು ತಿಳಿಸಿದ್ದರು. ಈಗ ಈ ಸಾಲುಗಳು ಪದೇ ಪದೇ ನೆನಪಾಗುತ್ತಿದೆ. ಇದಕ್ಕೆ ಕಾರಣ ದಿಗ್ವೇಶ್ ರಾಠಿ 18ನೇ ಆವೃತ್ತಿಯಲ್ಲಿ ಗಳಿಸಿದ್ದು ಎಷ್ಟು ಹಾಗೂ ಕಳೆದುಕೊಂಡಿದ್ದು ಎಷ್ಟು ಎಂಬ ಚರ್ಚೆಗಳು ಆರಂಭವಾಗಿವೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ ತಂಡದ ಪರ ದಿಗ್ವೇಶ್ ರಾಠಿ ಅಬ್ಬರಿಸಿದರು. ಇವರು ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿ ನೋಟ್ ಬುಕ್ ಸೆಲೆಬ್ರೇಷನ್ ಆಚರಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವರ್ತನೆಯಿಂದ ಕಂಗೆಟ್ಟ ಬಿಸಿಸಿಐ ದಿಗ್ವೇಶ್ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಂಡಿದೆ. ದಂಡದ ಬರೆ ನೀಡಿ ಒಂದು ಪಂದ್ಯದ ಶಿಕ್ಷೆಯನ್ನು ಘೋಷಿಸಿದೆ. ಇದೇ ಋತುವಿನಲ್ಲಿ ಬಿಸಿಸಿಐ ದಿಗ್ವೇಶ್ ಮೇಲೆ ಮೂರನೇ ಬಾರಿಗೆ ದಂಡದ ಬರೆ ಬೀಸಿದೆ.
ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ದಿಗ್ವೇಶ್ ರಾಠಿಗೆ ಮೊದಲ ಬಾರಿಗೆ ದಂಡ ವಿಧಿಸಲಾಗಿತ್ತು. ಈ ವೇಳೆಯೂ ಇವರು ಪ್ರಿಯಾಂಶ್ ಆರ್ಯರನ್ನು ಔಟ್ ಮಾಡಿ ತಮ್ಮ ಸಿಗ್ನೇಚರ್ ನೋಟ್ಬುಕ್ ಸೆಲೆಬ್ರೇಷನ್ ಮಾಡಿದರು. ಇದರಿಂದಾಗಿ ಅವರಿಗೆ 1.87 ಲಕ್ಷ ರೂ. ದಂಡ ವಿಧಿಸಲಾಯಿತು. ಇನ್ನು ಏಪ್ರಿಲ್ 4 ರಂದು ನಡೆದು ಪಂದ್ಯದಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲೂ ದಂಡ ವಿಧಿಸಲಾಗಿತ್ತು. ಈ ವೇಳೆ ಇವರಿಗೆ 3.75 ಲಕ್ಷ ರೂ. ದಂಡ ಬಿದ್ದಿತ್ತು. ಇನ್ನು ಸೋಮವಾರ ನಡೆದ ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲೂ ದಿಗ್ವೇಶ್ ರಾಠಿಗೆ ಮೂರನೇ ಬಾರಿಗೆ ದಂಡ ವಿಧಿಸಲಾಯಿತು. ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕೆಣಕಿದ ದಿಗ್ವೇಶ್ ಜೇಬಿಗೆ 3.75 ಲಕ್ಷ ರೂ. ಕತ್ತರಿ ಬಿದ್ದಿತು.
ದಿಗ್ವೇಶ್ ರಾಠಿ ಅವರಿಗೆ ಎಲ್ಎಸ್ಜಿ 30 ಲಕ್ಷ ರೂ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಈಗಾಗಲೇ ದಿಗ್ವೇಶ್ 9.37 ಲಕ್ಷ ರೂ. ಖರ್ಚು ಮಾಡಿದ್ದಾರೆ. ಎಲ್ಎಸ್ಜಿ ತಂಡದ ಯಶಸ್ವಿ ಬೌಲರ್ಗಳಲ್ಲಿ ದಿಗ್ವೇಶ್ ರಾಠಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಆಡಿದ 12 ಪಂದ್ಯಗಳಲ್ಲಿ 8.18ರ ಎಕಾನಮಿಯಲ್ಲಿ 14 ವಿಕೆಟ್ ಪಡೆದಿದ್ದಾರೆ.