ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಬಹುದಿನಗಳ ನಂತರ ಟಿ20 ಕ್ರಿಕೆಟ್ ಸಂಚಲನ ಮೂಡಿಸಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಕೊನೆಯ ಮತ್ತು ಮೂರನೇ ಟಿ20 ಪಂದ್ಯದಲ್ಲಿ ಸಂಜು ಭರ್ಜರಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಕೊನೆಯ ಟಿ20 ಗೆಲ್ಲುವ ನಿರೀಕ್ಷೆಯಲ್ಲಿ ಬಂದಿದ್ದ ಬಾಂಗ್ಲಾದೇಶದ ಲೆಕ್ಕಚಾರವನ್ನು ಸಂಜು ಸ್ಯಾಮ್ಸನ್ ಉಲ್ಟಾ ಮಾಡಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಅವರು 40 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಬಾಂಗ್ಲಾದೇಶದ ಬೌಲರ್ಗಳನ್ನು ಬೆಂಡೆತ್ತಿದರು. ಶತಕ ಬಾರಿಸಿದ ಬಳಿಕ ಸ್ಯಾಮ್ಸನ್ ಅವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಅದ್ಭುತ ಸಿಕ್ಸರ್ಗಳನ್ನು ಬಾರಿಸಿರುವ ಮೂಲಕ 111 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಜು ಸ್ಯಾಮ್ಸನ್ ಅವರ ಭರ್ಜರಿ ಇನ್ನಿಂಗ್ಸ್ ನೋಡಿ ಕಣ್ತುಂಬಿಕೊಂಡಿದ್ದಾರೆ. ಅಲ್ಲದೆ, ಈ ಇನ್ನಿಂಗ್ಸ್ ಮೂಲಕ ಟೀಮ್ ಇಂಡಿಯಾದಲ್ಲಿ ಸಂಜು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಂಜು ಓವರ್ಗೆ 5 ಸಿಕ್ಸರ್ ಬಾರಿಸಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ಎಲ್ಲ ಯಶಸ್ಸಿನ ಹಿಂದೆ ಹಲವು ಕಾಣದ ಕೈಗಳಿವೆ. ಆದರೆ ಸ್ವತಃ ಸಂಜು ಅವರು ಈ ಅದ್ಭುತ ಪ್ರದರ್ಶನ ಕಾರಣ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಶತಕ ಸಿಡಿಸಿದ ನಂತರ ಮಾತನಾಡಿರುವ ಸಂಜು ಸ್ಯಾಮ್ಸನ್, "ನಾನು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರು (ತಂಡದವರು) ಸಂತೋಷಪಟ್ಟಿದ್ದಾರೆ ಎಂದು ನನಗೆ ತುಂಬಾ ಸಂತಸವಾಗಿದೆ. ನಾನು ಹೆಚ್ಚು ಉತ್ತಮವಾಗಿ ಆಡುತ್ತೇನೆ ಎಂದು ಭಾವಿಸಿದೆ. ಆದರೆ ಹಲವು ಪಂದ್ಯಗಳನ್ನು ಆಡಿದ ನಂತರ, ಒತ್ತಡ ಮತ್ತು ನನ್ನ ವೈಫಲ್ಯಗಳನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿತ್ತು. ಏಕೆಂದರೆ ನಾನು ಅನೇಕ ಬಾರಿ ವಿಫಲವಾಗಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಂಜು ಸ್ಯಾಮ್ಸನ್ ತಮ್ಮ ಅದೃಷ್ಟವನ್ನು ಬದಲಾಯಿಸಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಹೆಡ್ ಕೋಚ್ ಗೌತಮ್ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರಿಗೆ ಧನ್ಯವಾದ ಹೇಳಿದ್ದಾರೆ. 'ತಂಡದ ನಾಯಕತ್ವದಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ನನ್ನ ದೇಶಕ್ಕಾಗಿ ಆಡುವಾಗ ಒತ್ತಡವಿತ್ತು. ಆದರೆ ನಾನು ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಏನೇ ಆಗಲಿ ಅವರು ನನಗೆ ಸದಾ ಬೆಂಬಲ ನೀಡುತ್ತಾರೆ. ಕಳೆದ ಸರಣಿಯಲ್ಲಿ, ನಾನು ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದೆ. ಇದಾದ ನಂತರ ಏನಾಗಬಹುದು ಎಂಬ ಟೆಕ್ಷನ್ನಲ್ಲಿ ನಾನು ಕೇರಳಕ್ಕೆ ಹಿಂತಿರುಗಿದೆ. ಆದರೆ, ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಪ್ರಾರಂಭಕ್ಕೆ ಎರಡು-ಮೂರು ವಾರಗಳ ಮೊದಲು, ಸರಣಿಯಲ್ಲಿ ನಾನು ಇನ್ನಿಂಗ್ಸ್ ತೆರೆಯುವ ಬಗ್ಗೆ ಸೂರ್ಯಕುಮಾರ್ ಯಾದವ್, ಗೌತಮ್ ಗಂಭೀರ್ ಮತ್ತು ಅಭಿಷೇಕ್ ನಾಯರ್ ಹೇಳಿದ್ದರು ಎಂದು ಸಂಜು ತಿಳಿಸಿದ್ದಾರೆ.