ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಸ್ಟಾರ್ ಕರುಣ್ ನಾಯರ್ ಆರ್ಭಟ ನಡೆಸಿದ್ದಾರೆ. ದೇಶೀಯ ಟೂರ್ನಿಯಲ್ಲಿ ವಿದರ್ಭ ಪರ ಆಡುತ್ತಿರುವ ಕರುಣ್ ರನ್ ಮಹಲ್ ಕಟ್ಟಿದ್ದಾರೆ. ಇವರು ಏಕದಿನ ಫಾರ್ಮೆಟ್ನ ದೇಶೀಯ ಟೂರ್ನಿಯಲ್ಲಿ ಆಡಿದ6 ಪಂದ್ಯಗಳಲ್ಲಿ 664 ರನ್ಗಳಿಸಿದ್ದರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ ಸಹ 120 ಆಗಿದೆ. ಪ್ರಸಕ್ತ ಸರಣಿಯಲ್ಲಿ ಕರುಣ್ ಟಾಪ್ ಸ್ಕೋರರ್.
ಕರುಣ್ ನಾಯರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಂ ಬ್ಯಾಕ್ ಮಾಡಬೇಕು ಎಂಬ ಕೂಗ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇವರ ಆಟವನ್ನು ಕಂಡು ಹಲವು ಮಾಜಿ ಆಟಗಾರರು ಸಹ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕರುಣ್ ವಿದರ್ಭ ತಂಡದ ಪರ ಗುರುವಾರ ಮತ್ತೊಮ್ಮೆ ಅಂಗಳ ಪ್ರವೇಶಿಸಲಿದ್ದಾರೆ. ಈ ವೇಳೆ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿರಲಿದೆ. ಇವರು ಭಾರತ ತಂಡಕ್ಕೆ ಕಂ ಬ್ಯಾಕ್ ಮಾಡಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಧ್ವನಿ ಎತ್ತಿದ್ದಾರೆ.

ಭಾರತದ ಪರ ಕರುಣ್ ಈಗಾಗಲೇ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ತ್ರಿಶತಕದ ಸಾಧನೆಯನ್ನು ಸಹ ಮಾಡಿದ್ದಾರೆ. ಇವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡುವಂತೆ ಒತ್ತಡ ಕೇಳಿ ಬರುತ್ತಿದೆ. ಇನ್ನು ಟೀಮ್ ಇಂಡಿಯಾದಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಮಾನದಂಡಗಳು ಏನು ಎಂದು ಪ್ರಶ್ನಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರನ್ ಕಲೆ ಹಾಕದಿರುವ ಕಾರಣಕ್ಕೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ ದೇಶೀಯ ಟೂರ್ನಿ ಆಡಲು ಸಲಹೆ ನೀಡಿದೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಅವಕಾಶವೇ ಸಿಗುತ್ತಿಲ್ಲ ಎಂದು ಭಜ್ಜಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕರುಣ್ ನಾಯರ್ ಅಮೋಘ ಫಾರ್ಮ್ನಲ್ಲಿದ್ರೂ ಸಹ ಅವರನ್ನು ಆಯ್ಕೆ ಮಾಡದಿರಲು ಕಾರಣ ಏನು ಎಂಬ ಹರ್ಭಜನ್ ಪ್ರಶ್ನೆ ಮಾಡಿದ್ದಾರೆ.

ಕೆಲವು ಆಟಗಾರರು ದೇಶೀಯ ಟೂರ್ನಿಯಲ್ಲಿ ಎರಡು ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಲಿ, ಐಪಿಎಲ್ನಲ್ಲಿ ಅಬ್ಬರಿಸಿದರೆ, ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ. ಆದರೆ ದೇಶೀಯ ಟೂರ್ನಿಯಲ್ಲಿ ಮಿಂಚುತ್ತಿರುವ ಆಟಗಾರರಿಗೆ ಅವಕಾಶ ಇಲ್ಲವೇ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೂ ಆಟಗಾರರನ್ನು ನಿರ್ಲಕ್ಷಿಸುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
'ಹಲವು ಆಟಗಾರರನ್ನು ಕೇವಲ ಎರಡು ಪಂದ್ಯಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ, ಕೆಲವರನ್ನು ಐಪಿಎಲ್ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ' ಎಂದು ಹರ್ಭಜನ್ ಹೇಳಿದರು. ಅದಕ್ಕೆ ನಿಯಮಗಳು ಏಕೆ ಭಿನ್ನವಾಗಿವೆ? ರೋಹಿತ್ ಮತ್ತು ವಿರಾಟ್ ಫಾರ್ಮ್ನಲ್ಲಿಲ್ಲ ಎಂದು ಜನರು ಹೇಳುತ್ತಾರೆ, ಮತ್ತು ನೀವು ಅವರನ್ನು ರಣಜಿಗೆ ಕಳುಹಿಸುತ್ತಿದ್ದೀರಿ. ಆದರೆ ರಣಜಿ ಆಡುತ್ತಾ ರನ್ ಗಳಿಸುತ್ತಿರುವವರನ್ನು... ನೀವು ಅವರನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ? ಈ ಹುಡುಗರು ಯಾವಾಗ ಆಡುತ್ತಾರೆ? ಅವರು ಇಲ್ಲಿ ರನ್ ಗಳಿಸುತ್ತಿದ್ದಾರೆ.
ಬೇರೆ ಬೇರೆ ಆಟಗಾರರಿಗೆ ಬೇರೆ ಬೇರೆ ಮಾನದಂಡಗಳು ಇದ್ದಂತೆ ಕಾಣುತ್ತವೆ. ಕರುಣ್ ಟ್ಯಾಟೂ ಹಾಕಿಸಿಕೊಂಡಿಲ್ಲ. ರಂಗ್ ಬಿರಂಗಿ ಬಟ್ಟೆ ಹಾಕಿಕೊಳ್ಳುವುದಿಲ್ಲ ಎಂದು ಅವರನ್ನು ಆಯ್ಕೆ ಮಾಡುತ್ತಿಲ್ಲವೇ ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.