ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದರಿಂದ ಎರಡನೇ ಟೆಸ್ಟ್ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ವೇಳೆ ಟೀಮ್ ಇಂಡಿಯಾಕ್ಕೆ ಡಬಲ್ ಟೆನ್ಷನ್ ಆರಂಭವಾಗಿದೆ. ಹಾಗಿದ್ದರೆ ಆ ಚಿಂತೆ ಏನು? ಗುವಾಹಟಿ ಟೆಸ್ಟ್ ಪಂದ್ಯಕ್ಕೆ ಹೇಗಿರಲಿದೆ ಭಾರತದ ಪ್ಲೇಯಿಂಗ್ ಇಲೆವೆನ್ ಎಂಬ ಬಗ್ಗೆ ವರದಿ ಇಲ್ಲಿದೆ.
ಕೋಲ್ಕತ್ತಾ ಟೆಸ್ಟ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದರಿಂದ ಟೀಮ್ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಪುಟಿದೇಳುವ ಕನಸು ಕಾಣುತ್ತಿದೆ. ಈ ವೇಳೆ ತಂಡದಿಂದ ಇಬ್ಬರು ಸ್ಟಾರ್ ಆಟಗಾರರು ಹೊರ ಹೋಗುವ ಸಾಧ್ಯತೆ ಇದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದ ಶುಭಮನ್ ಗಿಲ್, ಎರಡನೇ ಟೆಸ್ಟ್ ಮಿಸ್ ಮಾಡಿಕೊಳ್ಳಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಸೇರುವುದು ಯಾರು ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ.

ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್ ಇಬ್ಬರಲ್ಲಿ ಒಬ್ಬರು ಸೇರುವ ಸಾಧ್ಯತೆ ಇದೆ. ಪ್ರಸಕ್ತ ದೇಶೀಯ ಟೂರ್ನಿಯ ಲಯವನ್ನು ಗಮನಸಿದರೆ, ದೇವದತ್ ಪಡಿಕ್ಕಲ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಸಾಯಿ ಸುದರ್ಶನ್ ಸಹ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಿಂದ ಹೊರಹೋಗಿದ್ದ ನಿತೀಶ್ ಕುಮಾರ್ ರೆಡ್ಡಿ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾದ ಭರವಸೆಯ ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್ ಸಹ ಎರಡನೇ ಟೆಸ್ಟ್ನಿಂದ ಹೊರ ಹೋಗುವ ಸಾಧ್ಯತೆ ಇದೆ. ಇವರು ಈ ತಿಂಗಳ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಹೀಗಾಗಿ ಈಗಾಗಲೇ ಕುಲ್ದೀಪ್ ಬಿಸಿಸಿಐನಲ್ಲಿ ರಜೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇವರು ಎರಡನೇ ಟೆಸ್ಟ್ಗೆ ಅಲಭ್ಯರಾದಲ್ಲಿ ತಂಡಕ್ಕೆ ಡಬಲ್ ಟೆನ್ಷನ್ ಆರಂಭವಾಗಲಿದೆ. ಕುಲ್ದೀಪ್ ತಮ್ಮ ಚೈನಾ ಮೆನ್ ದಾಳಿಯ ಮೂಲಕವೇ ಎದುರಾಳಿಗಳನ್ನು ಕಾಡ ಬಲ್ಲ ಬೌಲರ್. ಇವರು ಅನುಪಸ್ಥಿತಿ ಸಹ ತಂಡದ ಬೌಲಿಂಗ್ ವಿಭಾಗದ ಮೇಲೆ ನೇರ ಪರಿಣಾಮ ಬೀರಲಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾದ ಯುವ ಆಟಗಾರರು ಅನುಭವಿಗಳ ಅನುಪಸ್ಥಿತಿಯಲ್ಲಿ ಅಬ್ಬರದ ಪ್ರದರ್ಶನ ನೀಡಲು ತಯಾರಿ ನಡೆಸಿದ್ದಾರೆ.

ಭಾರತದ ಸಂಭಾವ್ಯ ತಂಡ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್/ ದೇವದತ್ ಪಡಿಕ್ಕಲ್, ಧ್ರುವ ಜುರೆಲ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ.