ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಶುಭಾರಂಭವನ್ನು ಮಾಡಿದೆ. ಈ ಪಂದ್ಯವನ್ನು ಟೀಮ್ ಇಂಡಿಯಾ 27 ಎಸೆತಗಳಲ್ಲಿ ಗೆದ್ದು ದಾಖಲೆ ನಿರ್ಮಿಸಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಸಂಘಟಿತ ಆಟ ಎದ್ದು ಕಾಣುತ್ತದೆ. ಇದೇ ವೇಳೆ ಯುಎಇ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಶಿವಂ ದುಬೆ ಅವರ ಗುಣಗಾನ ನಡೆಯುತ್ತಿದೆ. ಈ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಶಿವಂ ದುಬೆ ಮಾತನಾಡಿ ತಮ್ಮ ಯಶಸ್ಸಿನ ಸಿಕ್ರೆಟ್ ಬಿಚ್ಚಿಟ್ಟಿದ್ದಾರೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ರಿಂಕು ಸಿಂಗ್ ಬದಲಿಗೆ ಶಿವಂ ದುಬೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಇತ್ತೀಚಿನ ಕೆಲವು ಸರಣಿಗಳಲ್ಲಿ ಬೌಲಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡದ ಶಿವಂ ದುಬೆ ಈ ಬಾರಿ ಅಬ್ಬರಿಸಿದರು. ಯುಎಇ ವಿರುದ್ಧ ಶಿವಂ ದುಬೆ ಮೊನಚಾದ ದಾಳಿ ನಡೆಸಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ 2ನೇ ಬಾರಿಗೆ ಮೂರು ವಿಕೆಟ್ ಪಡೆದ ಸಾಧನೆಯನ್ನು ಮಾಡಿದರು. ಈ ಸಾಧನೆಯ ಬಗ್ಗೆ ಶಿವಂ ದುಬೆ ಮಾತನಾಡಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಹೋಲಿಕೆ ಮಾಡುವುದಕ್ಕೂ ಸಹ ಉತ್ತರ ನೀಡಿದ್ದಾರೆ.

"ಹಾರ್ದಿಕ್ ಪಾಂಡ್ಯ ಅವರನ್ನು ನೋಡಿ ನಾನು ಬಹಳ ಕಲೆಯುತ್ತಿದ್ದೇನೆ. ಅವರು ನನ್ನ ಸಹೋದರ ಇದ್ದಂತೆ. ಅವರಿಗೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪಾರ ಅನುಭವ ಇದೆ. ನಾನು ಅವರಿಂದ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಕಲಿಯುತ್ತಿರುವೆ. ನಾನು ಅವರು ಸಿಕ್ಕಾಗಲೆಲ್ಲಾ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ಅವರೊಂದಿಗೆ ನಾನು ಹೋಲಿಕೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಸಹ ಮಾಡಿಲ್ಲ. ನಾನು ಅವರೊಂದಿಗೆ ಆಡುವಾಗಲೆಲ್ಲಾ ಹೊಸದನ್ನು ಕಲಿಯಲು ಬಯಸುತ್ತಿರುತ್ತೇನೆ" ಎಂದು ಶಿವಂ ದುಬೆ ತಿಳಿಸಿದ್ದಾರೆ.
ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರೂ ವೇಗದ ಬೌಲಿಂಗ್ ಆಲ್ರೌಂಡರ್ಗಳು. ಇವರಿಗೆ ತಂಡ ವಿಭಿನ್ನ ಜವಾಬ್ದಾರಿಯನ್ನು ನೀಡಿದೆ. ಇವರಿಬ್ಬರೂ ಭಾರತ ಟಿ20 ವಿಶ್ವಕಪ್ ಗೆದ್ದಾಗ ತಮ್ಮದೇ ಕಾಣಿಕೆ ನೀಡಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ತಮ್ಮನ್ನು ತಾವು ಸೀಮಿತ ಓವರ್ಗಳ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ದುಬೆ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಳ್ಳಲು ಹೆಣಗಾಟ ನಡೆಸಿದ್ದಾರೆ.
ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಈಗಾಗಲೇ ಬೌಲಿಂಗ್ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಬೌಲಿಂಗ್ ಕೋಚ್ (ಮೋರ್ನೆ ಮಾರ್ಕೆಲ್) ಕೆಲವು ವಿಷಯಗಳಲ್ಲಿ ಕೆಲಸ ಮಾಡಲು ಕಿವಿ ಮಾತು ಹೇಳಿದ್ದರು. ನಾನು ಅವರು ಹೇಳಿದಂತೆ ನನ್ನ ರನ್ ಅಪ್ ಮೇಲೆ ಕೆಲಸ ಮಾಡಿದ್ದೇನೆ. ಹೀಗಾಗಿ ಇಂದು ಮೈದಾನದಲ್ಲಿ ನನಗೆ ಇದರ ಲಾಭ ಸಿಕ್ಕಿದೆ. ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡಿದಾಗ ಅದರ ತೃಪ್ತಿ ಬೇರೆ ರೀತಿಯಾಗಿರುತ್ತದೆ ಎಂದು ಶಿವಂ ದುಬೆ ತಿಳಿಸಿದ್ದಾರೆ.