ಗುರುವಾರ, ಜುಲೈ 6ರಂದು ಬೆಂಗಳೂರಿನ ಆಲೂರಿನ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2023ರ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಪಶ್ಚಿಮ ವಲಯ ತಂಡವು ಕೇಂದ್ರ ವಲಯ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
ಪಶ್ಚಿಮ ವಲಯದ ಮೊದಲ ಇನ್ನಿಂಗ್ಸ್ನಲ್ಲಿ 220 ರನ್ಗಳಿಗೆ ಉತ್ತರವಾಗಿ ಕೇಂದ್ರ ವಲಯ ತಂಡ 128 ರನ್ಗಳಿಗೆ ಅಲೌಟ್ ಆಯಿತು. 92 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ 3ನೇ ದಿನದಾಟದಂತ್ಯಕ್ಕೆ 9 ವಿಕೆಟ್ಗೆ 292 ರನ್ ಗಳಿಸಿದ್ದು, ಒಟ್ಟಾರೆ 384 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಭಾರತ ತಂಡದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತ ಟೆಸ್ಟ್ ತಂಡದಿಂದ ಕೈಬಿಟ್ಟ ನಂತರ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡದ ಪರ ಭರ್ಜರಿ ಶತಕ ಬಾರಿಸಿ, ಬ್ಯಾಟ್ ಮೂಲಕ ಉತ್ತರ ನೀಡಿದರು.

35 ವರ್ಷದ ಚೇತೇಶ್ವರ ಪೂಜಾರ ಕೇಂದ್ರ ವಲಯ ವಿರುದ್ಧ 3ನೇ ದಿನದಂದು 278 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 133 ರನ್ ಗಳಿಸಿ ದಿನದಂತ್ಯದಲ್ಲಿ ವಿಕೆಟ್ ಒಪ್ಪಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ 102 ಎಸೆತಗಳಲ್ಲಿ 28 ರನ್ ಗಳಿಸಿ ವಿಫಲರಾಗಿದ್ದ ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ತಂಡಕ್ಕೆ ನೆರವಾದರು.
ಆರಂಭಿಕರಾದ ಪೃಥ್ವಿ ಶಾ 25 ರನ್ ಮತ್ತು ಪ್ರಿಯಾಂಕ್ ಪಾಂಚಾಲ್ 15 ರನ್ ಗಳಿಸಿ ಔಟಾದ ನಂತರ, ಚೇತೇಶ್ವರ ಪೂಜಾರ ಹಾಗೂ ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್ಗೆ 95 ರನ್ಗಳ ಜೊತೆಯಾಟ ನೀಡಿದರು. ಸೌರಭ್ ಕುಮಾರ್ಗೆ ವಿಕೆಟ್ ಒಪ್ಪಿಸುವ ಮುನ್ನ ಸೂರ್ಯಯುಮರ್ ಯಾದವ್ 58 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 52 ರನ್ ಗಳಿಸಿದರು.
ನಂತರ ಸರ್ಫರಾಜ್ ಖಾನ್ 6 ರನ್ ಗಳಿಸಿ ಸೌರಭ್ ಕುಮಾರ್ಗೆ ವಿಕೆಟ್ ನೀಡಿದರು. ಹೆಟ್ ಪಟೇಲ್ 27 ರನ್, ಅತಿತ್ ಸೇಠ್ 9 ರನ್, ಧರ್ಮೇಂದ್ರ ಜಡೇಜಾ 9 ರನ್ ಗಳಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ಚೇತೇಶ್ವರ ಪೂಜಾರ ಭೋಜನ ವಿರಾಮದ ನಂತರ ಶತಕವನ್ನು ಗಳಿಸಿದರು. ಪೂಜಾರ ಅವರ ಶತಕದ ನೆರವಿನಿಂದ ಪಶ್ಚಿಮ ವಲಯ ತಂಡ 3ನೇ ದಿನದಲ್ಲಿ 380ಕ್ಕೂ ಹೆಚ್ಚು ರನ್ಗಳ ಮುನ್ನಡೆ ಸಾಧಿಸಿತು.
ಕೇಂದ್ರ ವಲಯ ತಂಡದ ಪರ ಬೌಲಿಂಗ್ನಲ್ಲಿ ಸೌರಭ್ ಕುಮಾರ್ 4 ವಿಕೆಟ್, ಸರನ್ಶ್ ಜೈನ್ 3 ವಿಕೆಟ್ ಮತ್ತು ಯಶ್ ಠಾಕೂರ್ 1 ವಿಕೆಟ್ ಪಡೆದರು.
ಭಾರತ ತಂಡದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರು. ಭಾರತ ತಂಡ 209 ರನ್ಗಳಿಂದ ಸೋತಿತು.
WTC ಫೈನಲ್ಗೆ ಮುಂಚಿತವಾಗಿ ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ ಎರಡರಲ್ಲಿ ಆಡಿದ್ದ ಚೇತೇಶ್ವರ ಪೂಜಾರ, ಓವಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಇನ್ನಿಂಗ್ಸ್ಗಳಲ್ಲಿ 14 ಮತ್ತು 27 ರನ್ ಗಳಿಸಿದರು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಕಡೆಗಣಿಸಲಾಯಿತು.
ಚೇತೇಶ್ವರ ಪೂಜಾರ ಅವರನ್ನು ರಾಷ್ಟ್ರೀಯ ತಂಡದಿಂದ ಕೈಬಿಡುತ್ತಿರುವುದು ಇದು ಎರಡನೇ ಬಾರಿ. ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 1-2 ಅಂತರದ ಸೋಲಿನ ನಂತರ ಈ ಮೊದಲು ಕೈಬಿಡಲಾಗಿತ್ತು. ಬಳಿಕ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಕಾಣಿಸಿಕೊಂಡಿರಲಿಲ್ಲ.
ಆದರೆ, ಭಾರತ ಮತ್ತು ಇಂಗ್ಲೆಂಡ್ನ ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯಕ್ಕಾಗಿ ಭಾರತ ಟೆಸ್ಟ್ ತಂಡಕ್ಕೆ ಮರಳಿದರು.
ಇದೀಗ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ತಂಡದ ಭಾಗವಾಗಿ ಚೇತೇಶ್ವರ ಪೂಜಾರ ಇಲ್ಲ. ಭಾರತ ತಂಡದ ಜುಲೈ 12ರಿಂದ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.