ಜೂನ್ 28ರಂದು 2023ರ ದುಲೀಪ್ ಟ್ರೋಫಿ ಪಂದ್ಯಾವಳಿ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಇದಕ್ಕಾಗಿ ಪೂರ್ವ ವಲಯ ತಂಡವನ್ನು ಪ್ರಕಟಿಸಲಾಗಿದೆ. ಪ್ರಥಮ ದರ್ಜೆ ಪಂದ್ಯಾವಳಿಗಾಗಿ ಪೂರ್ವ ವಲಯ ತಂಡಕ್ಕೆ 27 ವರ್ಷದ ಅಭಿಮನ್ಯು ಈಶ್ವರನ್ ಅವರನ್ನು ನಾಯಕರನ್ನಾಗಿ ಘೋಷಿಸಲಾಗಿದೆ.
ಇನ್ನು ಜಾರ್ಖಂಡ್ ಪರ ರಣಜಿ ಟ್ರೋಫಿ ಆಡುತ್ತಿರುವ ಶಹಬಾಜ್ ನದೀಮ್ ಅವರನ್ನು ಪೂರ್ವ ವಲಯ ತಂಡದ ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರು ದುಲೀಪ್ ಟ್ರೋಫಿ ಆಯ್ಕೆಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿ ಅಭಿಮನ್ಯು ಈಶ್ವರನ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲು ಕಾರಣವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಟೆಸ್ಟ್ ಸರಣಿಯು ಸಮೀಪಿಸುತ್ತಿರುವಾಗಲೇ ಇಶಾನ್ ಕಿಶನ್ ಪಂದ್ಯಾವಳಿಗೆ ಆಯ್ಕೆಯಿಂದ ಹೊರಗುಳಿಯುವುದರಿಂದ ಪೂರ್ವ ವಲಯದ ಆಯ್ಕೆಗಾರರು ಗೊಂದಲಕ್ಕೀಡಾಗಿದ್ದಾರೆ ಎಂದು ವರದಿಯಾಗಿತ್ತು.
ಇದೇ ವೇಳೆ ಇಶಾನ್ ಕಿಶನ್ ದುಲೀಪ್ ಟ್ರೋಫಿಗೆ ಆಯ್ಕೆಯಿಂದ ಹೊರಗುಳಿಯುವ ನಿರ್ಧಾರದ ಬಳಿಕ, ಆಯ್ಕೆಗಾರರು ಅನುಭವಿ ವಿಕೆಟ್ಕೀಪರ್ ವೃದ್ಧಿಮಾನ್ ಸಹಾ ಕಡೆಗೆ ತಮ್ಮ ಗಮನ ಹರಿಸಿದ್ದರು. ಆದರೆ 38 ವರ್ಷದ ಆಟಗಾರನನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡುವುದರಲ್ಲಿ ಅರ್ಥವಿಲ್ಲವೆಂದು ಯುವ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
"ಇಶಾನ್ ಕಿಶನ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡದಲ್ಲಿದ್ದರು. ಆ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಕೆಎಸ್ ಭರತ್ ದಕ್ಷಿಣ ವಲಯ ತಂಡದ ಪರ ಆಡುತ್ತಿರುವ ಕಾರಣ, ನಾವು ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಬಹುದೇ ಎಂದು ತಿಳಿಸಲು ವಲಯ ಆಯ್ಕೆ ಸಮಿತಿ ಸಂಚಾಲಕರನ್ನು ಕೇಳಿದ್ದೇವೆ," ಎಂದು ಪೂರ್ವ ವಲಯ ಆಯ್ಕೆ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
"ಇಶಾನ್ ಕಿಶನ್ ವೈಟ್ ಬಾಲ್ ಕ್ರಿಕೆಟ್ನಲ್ಲಿ ಹಿರಿಯರ ತಂಡದ ಖಾಯಂ ಆಟಗಾರನಾಗಿರುವುದರಿಂದ ಅವರಿಗೆ ನಾಯಕತ್ವ ಸಿಗುತ್ತಿತ್ತು. ಇಶಾನ್ ಕಿಶನ್ ಅವರೊಂದಿಗೆ ಫೋನ್ ಮೂಲಕ ಸಂಪರ್ಕ ಸಾಧಿಸಿದಾಗ, ದುಲೀಪ್ ಟ್ರೋಫಿಯಲ್ಲಿ ಆಡಲು ಆಸಕ್ತಿ ಇಲ್ಲ ಎಂದು ನಮಗೆ ತಿಳಿಸಿದರು. ನಾವು ಗಾಯವಾಗಿದೆಯೇ ಅಥವಾ ಇಲ್ಲವೇ ಎಂದು ಕೇಳಿದಾಗ, ಅವರು ಆಡಲು ಬಯಸುವುದಿಲ್ಲ ಎಂದರು," ಎಂದು ಪೂರ್ವ ವಲಯ ಆಯ್ಕೆ ಸಮಿತಿ ಸಂಚಾಲಕ ದೇಬಾಶಿಶ್ ಚಕ್ರವರ್ತಿ ತಿಳಿಸಿದ್ದಾರೆ.
ಇನ್ನು 21 ವರ್ಷದ ರಿಯಾನ್ ಪರಾಗ್ ಕೂಡ ದುಲೀಪ್ ಟ್ರೋಫಿಗಾಗಿ ಪೂರ್ವ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿಯಾನ್ ಪರಾಗ್ ಇತ್ತೀಚೆಗೆ ಮುಕ್ತಾಯಗೊಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕಳಪೆ ಪ್ರದರ್ಶನ ನೀಡಿದರು. ದುಲೀಪ್ ಟ್ರೋಫಿಯಲ್ಲಿ ಅವರು ತಮ್ಮ ಪ್ರದರ್ಶನದಲ್ಲಿ ಸುಧಾರಣೆ ಕಾಣಲು ಎದುರು ನೋಡುತ್ತಾರೆ.
ಅಭಿಮನ್ಯು ಈಶ್ವರನ್ (ನಾಯಕ), ಸಂತಾನು ಮಿಶ್ರಾ, ಸುದೀಪ್ ಘರಾಮಿ, ರಿಯಾನ್ ಪರಾಗ್, ಎ. ಮಜುಂದಾರ್, ಬಿಪಿನ್ ಸೌರಭ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕೆ ಕುಶಾಗ್ರ (ವಿಕೆಟ್ ಕೀಪರ್), ಶಹಬಾಜ್ ನದೀಮ್ (ಉಪ ನಾಯಕ), ಶಹಬಾಜ್ ಅಹ್ಮದ್, ಮುಖೇಶ್ ಕುಮಾರ್, ಆಕಾಶ್ ದೀಪ್, ಅನುಕುಲ್ ರಾಯ್, ಎಂ ಮುರಾ ಸಿಂಗ್, ಇಶಾನ್ ಪೊರೆಲ್.