ಇದೇ ಜೂನ್ 28ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿ ಸರಣಿಗಾಗಿ ಹನುಮ ವಿಹಾರಿ ನಾಯಕತ್ವದ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದೆ. ಈ ಮೂಲಕ ಹನುಮ ವಿಹಾರಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ.
ರಣಜಿ ಟ್ರೋಫಿ 2022-23ರ ಕ್ವಾರ್ಟರ್ಫೈನಲ್ನಲ್ಲಿ ಇಂದೋರ್ನಲ್ಲಿ ಮಧ್ಯಪ್ರದೇಶ ವಿರುದ್ಧ ಆಂಧ್ರಪ್ರದೇಶದ ಸೋಲಿನ ವೇಳೆ ಹನುಮ ವಿಹಾರಿ ಅವರು ವೇಗಿ ಅವೇಶ್ ಖಾನ್ ಅವರ ಬೌಲಿಂಗ್ನಲ್ಲಿ ಮುಂದೋಳಿನ ಮುರಿತಕ್ಕೆ ಒಳಗಾಗಿದ್ದರು. ಇದೀಗ ಚಿಕಿತ್ಸೆಯ ನಂತರ ಚೇತರಿಸಿಕೊಂಡು ಕ್ರಿಕೆಟ್ಗೆ ವಾಪಸ್ ಆಗಿದ್ದಾರೆ.

ಗೋವಾದಲ್ಲಿ ಮಂಗಳವಾರ ಜೂನ್ 13ರಂದು ನಡೆದ ಸಭೆಯಲ್ಲಿ ದಕ್ಷಿಣ ವಲಯ ಅಸೋಸಿಯೇಷನ್ಗಳು ದುಲೀಪ್ ಟ್ರೋಫಿ ಸರಣಿಗಾಗಿ 15 ಜನರ ತಂಡವನ್ನು ಆಯ್ಕೆ ಮಾಡಿವೆ.
ಇತ್ತೀಚೆಗೆ ಲಂಡನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಡಿದ್ದ ಭಾರತೀಯ ವಿಕೆಟ್ಕೀಪರ್-ಬ್ಯಾಟರ್ ಕೆಎಸ್ ಭರತ್, ಆಂಧ್ರಪ್ರದೇಶ ತಂಡದ ರಿಕಿ ಭುಯಿ ಅವರೊಂದಿಗೆ ವಿಕೆಟ್ಕೀಪರ್ ಆಗಿ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ತಮಿಳುನಾಡು ರಾಜ್ಯದಿಂದ ವಾಷಿಂಗ್ಟನ್ ಸುಂದರ್, ಸಾಯಿ ಸುದರ್ಶನ್, ಪ್ರದೋಶ್ ರಂಜನ್ ಪಾಲ್ ಮತ್ತು ಸಾಯಿ ಕಿಶೋರ್ ಆಯ್ಕೆಯಾಗಿದ್ದಾರೆ. ಸಾಯಿ ಸುದರ್ಶನ್ 2022-23ರ ದೇಶೀಯ ಋತುವಿನಲ್ಲಿ ತಮಿಳುನಾಡು ಪರ ಅತ್ಯುತ್ತಮ ರನ್ ಗಳಿಸಿದ್ದರು. 2023ರ ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟನ್ಸ್ ತಂಡ ಫೈನಲ್ ತಲುಪಲು ನೆರವಾಗಿದ್ದರು.
ಇದೇ ವೇಳೆ 15 ಸದಸ್ಯರ ತಂಡದಲ್ಲಿ ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟರ್ಗಳಾ ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್ ಮತ್ತು ವೇಗದ ಬೌಲರ್ಗಳಾಗಿ ವಿಸ್ವತ್ ಕಾವೇರಪ್ಪ ಹಾಗೂ ವೈಶಾಕ್ ವಿಜಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ಮಯಾಂಕ್ ಅಗರ್ವಾಲ್ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಗಿದೆ.
2023ರ ಐಪಿಎಲ್ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್ ಮತ್ತು ತಿಲಕ್ ವರ್ಮಾ ಕೂಡ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ವಿಕೆಟ್ಕೀಪರ್ ಕೆಎಸ್ ಭರತ್ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಫಾರ್ಮ್ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಬ್ಯಾಟಿಂಗ್ ವೈಫಲ್ಯದ ನಂತರ, ಭಾರತ ತಂಡದ ಆಯ್ಕೆ ಸಮಿತಿ ತಂಡವನ್ನು ಬಲಪಡಿಸಲು ಕೆಲವು ಹೊಸ ಮುಖಗಳನ್ನು ಹುಡುಕುತ್ತಿದೆ. ದುಲೀಪ್ ಟ್ರೋಫಿ ಪಂದ್ಯಾವಳಿಯು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಭಾರತ ತಂಡದಲ್ಲಿ ಸ್ಥಾನ ಪಡೆಯುವ ಉತ್ತಮ ಅವಕಾಶವನ್ನು ಒದಗಿಸು ಸಾಧ್ಯತೆ ಇದೆ.
ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪ ನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ರಿಕಿ ಭುಯಿ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್, ರವಿಕುಮಾರ್ ಸಮರ್ಥ್, ತಿಲಕ್ ವರ್ಮ, ಸಚಿನ್ ಬೇಬಿ, ಸಾಯಿ ಕಿಶೋರ್, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ಕುಮಾರ್, ಪ್ರದೋಶ್ ರಂಜನ್ ಪಾಲ್, ಕೆವಿ ಸಸಿಕಾಂತ್, ದರ್ಶನ್ ಮಿಸಲ್.