ಶನಿವಾರ, ಜುಲೈ 8ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ದುಲೀಪ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಕೇಂದ್ರ ವಲಯ ವಿರುದ್ಧ ರೋಚಕ ಗೆಲುವು ಸಾಧಿಸಿತು.
ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಉತ್ತರ ವಲಯ 198 ರನ್ ಗಳಿಸಿತ್ತು. ಉತ್ತರವಾಗಿ ದಕ್ಷಿಣ ವಲಯ ತಂಡ 195 ರನ್ಗಳಿಗೆ ಆಲೌಟ್ ಆಯಿತು. 3 ಅಲ್ಪ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ನಲ್ಲಿ ಉತ್ತರ ವಲಯ 211 ರನ್ಗಳಿಗೆ ಸರ್ವಪತನ ಕಂಡಿತು.

ಇನ್ನು ಅಂತಿಮ ಇನ್ನಿಂಗ್ಸ್ನಲ್ಲಿ ಗೆಲುವಿಗೆ 215 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ವಲಯ ತಂಡ 8 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಕೊನೆಯ ದಿನದ ಮಧ್ಯಾಹ್ನದ ನಂತರ ಸುರಿದ ಮಳೆಯಿಂದಾಗಿ ಪಂದ್ಯಕ್ಕೆ ಕೆಲಕಾಲ ಸ್ಥಗಿತಗೊಂಡಿತ್ತು. ಮಳೆ ನಿಂತ ಬಳಿಕ ಆಟ ಪುನರಾರಂಭಗೊಂಡಿತು.
ಇನ್ನು ಮೊದಲೆರಡು ಇನ್ನಿಂಗ್ಸ್ಗಳಲ್ಲಿ ನಿರ್ಣಾಯಕ ಅರ್ಧಶತಕ ಬಾರಿಸಿದ ಕರ್ನಾಟಕದ ಮಯಾಂಕ್ ಅಗರ್ವಾಲ್ ಗೆಲುವಿನ ರೂವಾರಿಯಾದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಶ್ಚಿಮ ವಲಯ ಮತ್ತು ಕೇಂದ್ರ ವಲಯ ತಂಡಗಳ ನಡುವಿನ ಇನ್ನೊಂದು ಸೆಮಿಫೈನಲ್ ಡ್ರಾನಲ್ಲಿ ಅಂತ್ಯಗೊಂಡ ಕಾರಣ, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಪಶ್ಚಿಮ ವಲಯ ಫೈನಲ್ ಪ್ರವೇಶಿಸಿತು.
ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ಬುಧವಾರ, ಜುಲೈ 12ರಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 2023ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಇನ್ನು 215 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ವಲಯ ತಂಡದ ಪರ ಸಾಯಿ ಸುದರ್ಶನ್ 17 ರನ್, ಮಯಾಂಕ್ ಅಗರ್ವಾಲ್ 57 ಎಸೆತಗಳಲ್ಲಿ 7 ಬೌಂಡರಿ ಸಮೇತ 54 ರನ್ ಗಳಿಸಿದರು. ಆರ್ ಸಮರ್ಥ್ 5 ರನ್, ನಾಯಕ ಹನುಮ ವಿಹಾರಿ 42 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 43 ರನ್ ಗಳಿಸಿದರು.
ಉಳಿದಂತೆ ರಿಕಿ ಭುಯಿ 34 ರನ್, ತಿಲಕ್ ವರ್ಮಾ 25 ರನ್, ಸಾಯಿ ಕಿಶೋರ್ 15 ರನ್, ಕೆವಿ ಸಸಿಕಾಂತ್ 9 ರನ್ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.
ಕೇಂದ್ರ ವಲಯ ತಂಡದ ಪರ ಬೌಲಿಂಗ್ನಲ್ಲಿ ಹರ್ಷಿತ್ ರಾಣಾ 3 ವಿಕೆಟ್, ಬಲ್ತೇಜ್ ಸಿಂಗ್ ಮತ್ತು ವೈಭವ್ ಅರೋರಾ ತಲಾ 2 ವಿಕೆಟ್ ಪಡೆದರೆ, ನಾಯಕ ಜಯಂತ್ ಯಾದವ್ 1 ವಿಕೆಟ್ ಪಡೆದರು.