ಶನಿವಾರ, ಜುಲೈ 8ರಂದು ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆದ ಪಶ್ಚಿಮ ವಲಯ ಮತ್ತು ಕೇಂದ್ರ ವಲಯ ನಡುವಿನ 2023ರ ದುಲೀಪ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ಸೆಮಿಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡ ಕಾರಣ, ಮೊದಲ ಇನ್ನಿಂಗ್ಸ್ನಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಿದ್ದ ಪಶ್ಚಿಮ ವಲಯ ತಂಡ 2023ರ ದುಲೀಪ್ ಟ್ರೋಫಿ ಫೈನಲ್ ಪ್ರವೇಶಿಸಿತು.

ಇನ್ನೊಂದು ಸೆಮಿಫೈನಲ್ನಲ್ಲಿ ಉತ್ತರ ವಲಯ ತಂಡದ ವಿರುದ್ಧ 2 ವಿಕೆಟ್ಗಳಿಂದ ಗೆದ್ದ ದಕ್ಷಿಣ ವಲಯ ತಂಡದ ವಿರುದ್ಧ ಪಶ್ಚಿಮ ವಲಯ ತಂಡವು ಬುಧವಾರ, ಜುಲೈ 12ರಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ ಸೆಣಸಾಡಲಿದೆ.
ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಚಹಾದ ವಿರಾಮದ ವೇಳೆಗೆ ಮಳೆ ಸುರಿಯಲು ಪ್ರಾರಂಭಿಸಿತು ಮತ್ತು ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡಿತು. ಗೆಲ್ಲಲು 399 ರನ್ಗಳ ಅಸಾಧ್ಯ ಗುರಿಯನ್ನು ಬೆನ್ನಟ್ಟಿದ ಕೇಂದ್ರ ವಲಯ 4 ವಿಕೆಟ್ಗೆ 128 ರನ್ ಗಳಿಸಲಷ್ಟೇ ಶಕ್ತವಾಯಿತು.
ಮಳೆ ಬರದಿದ್ದರೆ, ಪಶ್ಚಿಮ ವಲಯ ಬಹುಶಃ ಉಳಿದ ಆರು ವಿಕೆಟ್ಗಳನ್ನು ಪಡೆಯಬಹುದಿತ್ತು. ಆದರೂ ಪಶ್ಚಿಮ ವಲಯ ತಂಡಕ್ಕೆ ಅದರ ಅವಶ್ಯಕತೆ ಇರಲಿಲ್ಲ. ಏಕೆಂದರೆ ಮೊದಲ ಇನ್ನಿಂಗ್ಸ್ನಲ್ಲಿ 98 ರನ್ಗಳ ಮುನ್ನಡೆ ಸಾಧಿಸಿತ್ತು.
ಇನ್ನು 9 ವಿಕೆಟ್ಗೆ 292 ರನ್ಗಳಿಂದ ನಾಲ್ಕನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಪಶ್ಚಿಮ ವಲಯ ತಂಡ ಆಲೌಟ್ ಆಗುವ ಮೊದಲು ಕೇವಲ 5 ರನ್ಗಳನ್ನು ಸೇರಿಸಲು ಸಾಧ್ಯವಾಯಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಕೇಂದ್ರ ವಲಯ ತಂಡದ ಆರಂಭಿಕರಾದ ವಿವೇಕ್ ಸಿಂಗ್ ಮತ್ತು ಹಿಮಾಂಶು ಮಂತ್ರಿ ಹೆಚ್ಚಿನ ಹೋರಾಟವನ್ನು ನೀಡದೆ ಪೆವಿಲಿಯನ್ ಸೇರಿದರು. ಆಗ 17 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.
ಧ್ರುವ್ ಜುರೆಲ್ 25 ರನ್ ಗಳಿಸಿದರೆ, ಅಮನ್ದೀಪ್ ಖರೆ ಅಜೇಯ 27 ರನ್, ರಿಂಕು ಸಿಂಗ್ ಅವರು 30 ಎಸೆತಗಳಲ್ಲಿ 40 ರನ್, ಉಪೇಂದ್ರ ಯಾದವ್ 18 ರನ್ ಗಳಿಸಿದರು. ಆಗ ಮಳೆ ಬಂದು ಆಟ ಸ್ಥಗಿತಗೊಂಡಿತು.
ಪಶ್ಚಿಮ ವಲಯ ತಂಡದ ಪರ ಬೌಲಿಂಗ್ನಲ್ಲಿ ಅರ್ಝನ್ ನಾಗ್ವಾಸ್ವಾಲ್ಲಾ, ಅತಿತ್ ಶೇಠ್, ಧರ್ಮೇಂದ್ರ ಜಡೇಜಾ ಮತ್ತು ಯುವರಾಜ್ಸಿನ್ಹ ಧೊಡಿಯಾ ತಲಾ ಒಂದೊಂದು ವಿಕೆಟ್ ಪಡೆದರು.