ಪ್ರಸ್ತುತ ಭಾರತದಲ್ಲಿ 2024ರ ದುಲೀಫ್ ಟ್ರೋಫಿ ಟೂರ್ನಿ ನಡೆಯುತ್ತಿದೆ. ಎಲ್ಲರ ಗಮನ ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೇಲಿದೆ. ಇತ್ತ ದುಲೀಪ್ ಟ್ರೋಫಿಯಲ್ಲಿ
ಭಾರತ ಎ ಮತ್ತು ಭಾರತ ಸಿ ನಡುವಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.
ಭಾರತದ ಯುವ ಪ್ರತಿಭೆಗಳು ದುಲೀಪ್ ಟ್ರೋಫಿಯಲ್ಲಿ ಶೈನ್ ಆಗುತ್ತಿದ್ದಾರೆ. ಈಗ ಭಾರತ ಸಿ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಹಿಡಿದ ಒನ್ ಹ್ಯಾಂಡ್ ಕ್ಯಾಚ್ ಎಲ್ಲರ ಗಮನವನ್ನು ದುಲೀಪ್ ಟ್ರೋಫಿ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕ್ಯಾಚ್ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರಿಯಾನ್ ಪರಾಗ್ 101 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಈ ವೇಳೆ ಭಾರತ ಸಿ ಪರವಾಗಿ ಗೌರವ್ ಯಾದವ್ ಬೌಲಿಂಗ್ ದಾಳಿಗಿಳಿದರು.
ಗೌರವ್ ಅವರ ಲೆಂತ್ ಬಾಲ್ನಲ್ಲಿ, ರಿಯಾನ್ ಪರಾಗ್ ಲೆಗ್ ಸೈಡ್ ಕಡೆಗೆ ಮುಂದಕ್ಕೆ ನುಗ್ಗಿ ಕವರ್ಗಳ ಮೇಲೆ ಬಿರುಸಿನ ಶಾಟ್ ಆಡಿದರು. ಬಾಲ್ ನೇರವಾಗಿ ಮಿಡ್ ಆಫ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತ ಸಿ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಕಡೆ ಹೋಯಿತು. ಈ ಸಂದರ್ಭದಲ್ಲಿ ಋತುರಾಜ್ ಜಿಂಕೆಯಂತೆ ಗಾಳಿಯಲ್ಲಿ ಜಿಗಿದು ಒಂದು ಕೈಯಲ್ಲಿ ಕ್ಯಾಚ್ ಹಿಡಿದರು. ಈ ಕ್ಯಾಚ್ ಒಂದು ಕ್ಷಣ ಪರಾಗ್ ಅವರಿಗೆ ಅಚ್ಚರಿ ತರಿಸಿತು. ಋತುರಾಜ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪರಾಗ್ ಅವರನ್ನು ಪೆವಲಿಯನ್ ಕಡೆ ಕಳುಹಿಸಿದರು.
ಭಾರತ ಎ ಮೊದಲ ಇನಿಂಗ್ಸ್ನಲ್ಲಿ 279 ರನ್ ಗಳಿಸಿದ್ದು, ಇದಕ್ಕೆ ಉತ್ತರವಾಗಿ ಭಾರತ ಸಿ ತಂಡ 234 ರನ್ ಗಳಿಸಿದೆ. ಭಾರತ ಎ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗೆ 270 ರನ್ ಗಳಿಸಿದೆ. ಇದೀಗ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದು, ನಾಲ್ಕನೇ ದಿನದಲ್ಲಿ ಪಂದ್ಯ ಫಲಿತಾಂಶದತ್ತ ಸಾಗಬಹುದು.