ಪ್ರಸಕ್ತ ಸಾಲಿನ ದುಲೀಪ್ ಟ್ರೋಫಿ ಕದನ ರೋಚಕ ಘಟ್ಟದತ್ತ ಮುಖ ಮಾಡಿದೆ. ಬೆಂಗಳೂರಿನ ಹೊರವಲಯದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಹಾಗೂ ಕೇಂದ್ರ ವಲಯ ತಂಡಗಳು ಮುನ್ನಡೆ ಸಾಧಿಸಿದ್ದು, ಫೈನಲ್ ಪ್ರವೇಶ ಪಡೆದಿವೆ. ಉತ್ತರ ವಲಯದ ವಿರುದ್ಧ ದಕ್ಷಿಣ ವಲಯ ಇನಿಂಗ್ಸ್ ಮುನ್ನಡೆ ಸಾಧಿಸಿದ್ದು, ಕೇಂದ್ರ ವಲಯ, ಪಶ್ಚಿಮ ವಲಯದ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದ್ದರಿಂದ ಪ್ರಶಸ್ತಿ ಸುತ್ತು ಪ್ರವೇಶಿಸಿವೆ. ಇನ್ನು ಪ್ರಶಸ್ತಿ ಸುತ್ತಿನ ಕಾದಾಟ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆ.11 ರಿಂದ 15ರ ವರೆಗೆ ನಡೆಯಲಿದೆ. ಫೈನಲ್ ಪಂದ್ಯ ಭಾರತೀಯ ಕಾಲಮಾನ 9.30ಕ್ಕೆ ನಡೆಯಲಿದೆ.
ದುಲೀಪ್ ಟ್ರೋಫಿಯ ಪಂದ್ಯದಲ್ಲಿ ದಕ್ಷಿಣ ವಲಯ ಹಾಗೂ ಕೇಂದ್ರ ವಲಯದ ತಂಡಗಳು ಇಲ್ಲಿಯವರೆಗೆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿವೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮೊಹಮ್ಮದ್ ಅಜರುದ್ಧಿನ್ ಮುಂದಾಳತ್ವದ ತಂಡ, ರಜತ್ ಪಟಿದಾರ್ ಮುಂದಾಳತ್ವದ ತಂಡದ ವಿರುದ್ಧ ಕಾದಟವನ್ನು ನಡೆಸಲಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿವೆ.

ಭಾನುವಾರ ನಡೆದ ಪಂದ್ಯದಲ್ಲಿ ಕೇಂದ್ರ ವಲಯ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ಗೆ 556 ರನ್ಗಳಿಂದ ಆಟ ಮುಂದುವರಿಸಿ 600 ರನ್ಗಳಿಗೆ ಆಲ್ಔಟ್ ಆಯಿತು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಆಟವನ್ನು ಮುಂದುವರೆಸಿದ ಪಶ್ಚಿಮ್ ವಲಯ 8 ವಿಕೆಟ್ಗೆ 216 ರನ್ ಕಲೆ ಹಾಕಿದ್ದಾಗ ಡ್ರಾ ಎಂದು ಘೋಷಿಸಲಾಯಿತು. ಕೇಂದ್ರ ವಲಯದ ಪರ ಸರಾಂಶ್ ಜೈನ್ 5 ಹಾಗೂ ಹರ್ಷಾ ದುಬೆ 3 ವಿಕೆಟ್ ಕಬಳಿಸಿದರು. ಉಳಿದಂತೆ ಪಶ್ವಿಮ ವಲಯದ ಪರ ಯಶಸ್ವಿ ಜೈಸ್ವಾಲ್ (64) ಅರ್ಧಶತಕ ಬಾರಿಸಿ ಮಿಂಚಿದರು. ಉಳದಂತೆ ಆರಂಭಿಕ ಆರ್ಯ ದೇಸಾಯಿ (35), ತುಷಾರ್ ಕೋಟ್ಯಾನ್ (40), ರನ್ ಕಲೆ ಹಾಕಿದರು.
ಇನ್ನೊಂದು ಪಂದ್ಯದಲ್ಲಿ ಉತ್ತರ ವಲಯ ನಾಲ್ಕನೇ ದಿನಕ್ಕೆ 5 ವಿಕೆಟ್ಗೆ 278 ರನ್ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿ 361 ರನ್ಗಳಿಗೆ ಆಲೌಟ್ ಆಯಿತು. ಆರಂಭಿಕ ಶುಭಂ ಕಜೋರಿಯಾ (128) ಭರ್ಜರಿ ಶತಕ ಬಾರಿಸಿ ಮಿಂಚಿದರು. 20 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಆರ್ಭಟಿಸಿದರು. ಉಳಿದಂತೆ ನಿಶಾಂತ್ ಸಿಂಧು (82), ಆಯೂಷ್ ಬದೋನಿ (40), ಮಯಾಂಕ್ ದಗಾರ್ (31) ತಂಡಕ್ಕೆ ಕೊಂಚ ಆಧಾರವಾದರು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯದ ಪರ ನಾರಾಯಣ್ ಜಗದೀಶನ್ ಅಜೇಯ 52 ರನ್ ಸಿಡಿಸಿದರು.