21 ವರ್ಷದ ವಿದರ್ಭ ತಂಡದ ಭರವಸೆಯ ಬ್ಯಾಟರ್ ಡ್ಯಾನಿಶ್ ಮಾಲೆವರ್ (ಅಜೇಯ 198 ರನ್) ಹಾಗೂ ರಜತ್ ಪಟಿದಾರ್ ಅವರ ಭರ್ಜರಿ ಆಟದ ನೆರವಿನಿಂದ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಜೋನಲ್ ತಂಡ ಸವಾಲಿನ ಮೊತ್ತದತ್ತ ದಾಪುಗಾಲು ಇಟ್ಟಿದೆ.
ಗುರುವಾರದಿಂದ ಆರಂಭವಾದ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಯುಷ್ ಪಾಂಡೆ 3 ರನ್ಗಳಿಗೆ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್ಗೆ ಆರಂಭಿಕ ಆರ್ಯನ್ ಜುಯಲ್ ಹಾಗೂ ದನೀಶ್ ಜೋಡಿ ಅಮೋಘ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿಯನ್ನು ಕಟ್ಟಿ ಹಾಕಲು ಎದುರಾಳಿ ಬೌಲರ್ಗಳು ಕಂಗಾಲಾದರು. ಆರಂಭಿಕ ಆರ್ಯನ್ 8 ಬೌಂಡರಿ ನೆರವಿನಿಂದ 60 ರನ್ ಬಾರಿಸಿದ್ದಾಗ ರಿಟೈಡ್ ಹರ್ಟ್ ಆದರು. ಇವರು ಪೆವಿಲಿಯನ್ಗೆ ಮರಳುತ್ತಿದ್ದಂತೆ ಕ್ರೀಸ್ಗೆ ನಾಯಕ ರಜತ್ ಪಾಟಿದಾರ್ ಬಂದರು.

ರಜತ್ ಪಾಟಿದಾರ್ ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದರು. ಇವರು ಯುವ ಆಟಗಾರ ಡ್ಯಾನಿಶ್ ಮಾಲೆವರ್ ಜೊತೆಗೂಡಿ ಉತ್ತಮ ಇನಿಂಗ್ಸ್ ಕಟ್ಟಿದರು. ತಂಡ ಅಂದುಕೊಂಡಿದ್ದ ಮೊತ್ತದತ್ತ ಸಾಗುವಲ್ಲಿ ಈ ಜೋಡಿ ಸಫಲವಾಯಿತು. ರಜತ್ ಪಾಟಿದಾರ್ 96 ಎಸೆತಗಳಲ್ಲಿ 21 ಬೌಂಡರಿ, 3 ಸಿಕ್ಸರ್ ಸಹಾಯದಿಂದ 125 ರನ್ ಸಿಡಿಸಿ ಔಟ್ ಆದರು. ವಿದರ್ಭ ಪರ ಆಡುವ ಯುವ ಆಟಗಾರ ದನೀಶ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ನಿಂದ ಎಲ್ಲರ ಗಮನ ಸೆಳೆದರು. ಇವರು 219 ಎಸೆತಗಳಲ್ಲಿ 35 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 198 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದ ಮುಕ್ತಾಯಕ್ಕೆ ಸೆಂಟ್ರಲ್ ಜೋನ್ 2 ವಿಕೆಟ್ಗೆ 432 ರನ್ ಸೇರಿಸಿತು.
ಇನ್ನೊಂದು ಪಂದ್ಯದಲ್ಲಿ ನಾರ್ಥ್ ಜೋನ್ ಹಾಗೂ ಈಸ್ಟ್ ಜೋನ್ಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಈಸ್ಟ್ ಜೋನ್ ಮೊದಲು ಬೌಲಿಂಗ್ ಮಾಡಿತು. ನಾರ್ತ್ ಜೋನ್ ಪರ ಯಾವೊಬ್ಬ ಬ್ಯಾಟರ್ ಬಿಗ್ ಇನಿಂಗ್ಸ್ ಕಟ್ಟದೇ ಇದ್ರೂ ಸಹ ತಂಡದ ದಿನದಾಟದಂತ್ಯಕ್ಕೆ 6 ವಿಕೆಟ್ಗೆ 308 ರನ್ ಕಲೆ ಹಾಕಿತು. ಶುಭಂ ಖಜುರಿಯಾ (26), ಅಂಕಿತ್ ಕುಮಾರ್ (30), ಯಶ್ ಧುಲ್ (39), ನಿಶಾಂತ್ ಸಿಂಧು (47), ಕನಯ್ಯ (ಅಜೇಯ 42) ತಂಡಕ್ಕೆ ಆಧಾರವಾದರು. ಭರವಸೆಯ ಆಟಗಾರ ಆಯುಷ್ ಬದೋನಿ 7 ಬೌಂಡರಿ ನೆರವಿನಿಂದ 63 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ನಾರ್ತ್ ಜೋನ್ 6 ವಿಕೆಟ್ ನಷ್ಟಕ್ಕೆ 308 ರನ್ ಕಲೆ ಹಾಕಿತು.