ಭರವಸೆಯ ಆಟಗಾರ ರುತುರಾಜ್ ಗಾಯಕ್ವಾಡ್ (184 ರನ್) ಸಿಡಿಸಿದ ಭರ್ಜರಿ ಶತಕ ಹಾಗೂ ಸ್ಟಾರ್ ಆಲ್ರೌಂಡರ್ ತನುಷ್ ಕೋಟ್ಯಾನ್ (ಅಜೇಯ 65 ರನ್) ಇವರುಗಳ ಭರ್ಜರಿ ಆಟದ ನೆರವಿನಿಂದ ಪಶ್ವಿಮ್ ವಲಯ ತಂಡ, ಕೇಂದ್ರ ವಲಯದ ವಿರುದ್ಧ ದಿನದಾಟದ ಗೌರವಕ್ಕೆ ಪಾತ್ರವಾಗಿದೆ.
ಬೆಂಗಳೂರಿನ ಹೊರ ವಲಯದಲ್ಲಿರುವ ಕ್ರಿಕೆಟ್ ಅಂಗಳದಲ್ಲಿ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯಗಳು ನಡೆಯುತ್ತಿವೆ. ಈ ವೇಳೆ ಪಶ್ಚಿಮ ವಲಯ, ಕೇಂದ್ರ ವಲಯದ ವಿರುದ್ಧ ಟಾಸ್ ಗೆದ್ದಯ ಬ್ಯಾಟಿಂಗ್ ಮಾಡಲು ಮುಂದಾಗಿದೆ. ನಾಯಕ ಶಾರ್ದೂಲ್ ಠಾಕೂರ್ ಅವರ ನಿರ್ಧಾರವನ್ನು ಪಶ್ಚಿಮ ವಲಯದ ಆರಂಭಿಕ ಆಟಗಾರರು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಯಶಸ್ವಿ ಜೈಸ್ವಾಲ್, ಹಾರ್ವಿಕ್ ದೇಸಾಯಿ ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. ಮೂರನೇ ವಿಕೆಟ್ಗೆ ಆರ್ಯ ದೇಸಾಯಿ ಹಾಗೂ ರುತುರಾಜ್ ಗಾಯಕ್ವಾಡ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೂರನೇ ವಿಕೆಟ್ಗೆ 82 ರನ್ ಸೇರಿಸಿತು. ಆರ್ಯ ದೇಸಾಯಿ 39 ರನ್ಗಳಿಗೆ ಆಟ ಮುಗಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ 25, ಶಾಮ್ಸ್ ಮುಲಾನಿ 18 ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆರನೇ ವಿಕೆಟ್ಗೆ ರುತುರಾಜ್ ಗಾಯಕ್ವಾಡ್ ಹಾಗೂ ತನುಷ್ ಕೋಟ್ಯಾನ್ ಜೊಡಿ 148 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಭರವಸೆಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ 206 ಎಸೆತಗಲ್ಲಿ 25 ಬೌಂಡರಿ, 1 ಸಿಕ್ಸರ್ ಸಹಾಯದಿಂದ 184 ರನ್ ಸೇರಿಸಿ ಔಟ್ ಆದರು. ಎರಡನೇ ದಿನಕ್ಕೆ ತನುಷ್ ಕೋಟ್ಯಾನ್ ಅಜೇಯ 65 ರನ್ ಸಿಡಿಸಿದರೆ, ನಾಯಕ ಶಾರ್ದೂಲ್ ಠಾಕೂರ್ ಅಜೇಯ 24 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ದಕ್ಷಿಣ ವಲಯದ ವಿರುದ್ಧ ಟಾಸ್ ಗೆದ್ದ ಉತ್ತರ ವಲಯ ಫೀಲ್ಡಿಂಗ್ ಮಾಡಲು ಮುಂದಾಯಿತು. ದಕ್ಷಿಣ ವಲಯದ ಆರಂಭಿಕರು ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ತನ್ಮಯ್ ಅಗ್ರವಾಲ್ ಹಾಗೂ ನಾರಾಯಣ್ ಜಗದೀಶನ್ ಮೊದಲ ವಿಕೆಟ್ಗೆ 103 ರನ್ ಜೊತೆಯಾಟವನ್ನು ನೀಡಿತು. ಈ ವೇಳೆ ತನ್ಮಯ್ 43 ರನ್ ಸಿಡಿಸಿದ್ದಾಗ ಔಟ್ ಆದರು. ಎರಡನೇ ವಿಕೆಟ್ಗೆ ಜಗದೀಶನ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಸಹ ಶತಕದ ಜೊತೆಯಾಟವನ್ನು ನೀಡಿತು. ದೇವದತ್ 7 ಬೌಂಡರಿ ನೆರವಿನಿಂದ 57 ರನ್ ಬಾರಿಸಿ ಔಟ್ ಆದರು.

ಇನ್ನು ದಿನದಾಟದಲ್ಲಿ ಎಲ್ಲರ ಚಿತ್ತ ಕದ್ದ ಆಟಗಾರ ನಾರಾಯಣ್ ಜಗದೀಶನ್ 260 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 148 ರನ್ ಸಿಡಿಸಿದರು. ನಾಯಕ ಮೊಹಮ್ಮದ್ ಅಜರುದ್ಧಿನ್ ಅಜೇಯ 11 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಉತ್ತರ ವಲಯದ ಪರ ನಿಶಾಂತ್ ಸಿಂಧು 2 ವಿಕೆಟ್ ಕಬಳಿಸಿದರು.