
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ಕೆಲ ಆಸ್ಟ್ರೇಲಿಯಾ ಆಟಗಾರರು ಇದ್ದಕ್ಕಿಂತೆ ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಇದರಿಂದಾಗಿ ಐಪಿಎಲ್ನಲ್ಲಿ ಸಣ್ಣ ಗೊಂದಲದ ವಾತಾವರಣವೂ ಉಂಟಾಗಿತ್ತು. ಆದರೆ ಬಿಸಿಸಿಐ ಈ ಬಾರಿಯ ಐಪಿಎಲ್ ನಿಗದಿಯಂತೆಯೇ ಮುಂದುವರಿಯುತ್ತದೆ ಎಂದು ಭರವಸೆಯನ್ನು ವ್ಯಕ್ತಪಡಿಸಿತ್ತು.
ಈ ಮಧ್ಯೆ ಆಸ್ಟ್ರೇಲಿಯಾದ ಇನ್ನೋರ್ವ ಆಟಗಾರ ಕೆಕೆಆರ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. ಐಪಿಎಲ್ಅನ್ನು ಅರ್ಧಕ್ಕೆ ರದ್ದುಗೊಳಿಸುವುದು ಈ ಪರಿಸ್ಥಿತಿಗೆ ಪರಿಹಾರವಾಗುವುದಿಲ್ಲ ಎಂದಿದ್ದಾರೆ ಆಸ್ಟ್ರೇಲಿಯಾದ ವೇಗಿ.
"ಇಂತಾ ಪರಿಸ್ಥಿತಿಯಲ್ಲಿ 3-4 ಗಂಟೆಗಳ ಕಾಲ ಜನರು ಮನೆಯಲ್ಲಿಯೇ ಉಳಿಯುವಂತಾಗಿ ಕ್ರಿಕೆಟ್ ಪಂದ್ಯಗಳ ವೀಕ್ಷಣೆಯಲ್ಲಿ ಕಳೆಯುತ್ತಾರೆ. ಹಾಗಾಗಿ ಟೂರ್ನಿಯನ್ನು ರದ್ದುಗೊಳಿಸುವುದು ಇದಕ್ಕೆ ಉತ್ತರವಾಗಲಾರದು" ಎಂದಿದ್ದಾರೆ ಕಮ್ಮಿನ್ಸ್. ಗುರುವಾರ ಏಪ್ರಿಲ್ 28ರಂದು ಭಾರತದಲ್ಲಿ ಒಟ್ಟು 3,79,257 ಕೊರೊನಾ ವೈಸರ್ ಪ್ರಕರಣಗಳು ಪತ್ತೆಯಾಗಿದ್ದು 3,645 ಜನರು 24 ಗಂಟೆಗಳ ಅಂತರದಲ್ಲಿ ಇದಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಆಂಡ್ರೋ ಟೈ, ಆರ್ಸಿಬಿಯ ಆಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಟೂರ್ನಿಯನ್ನು ಮೊಟಕುಗೊಳಿಸಿ ಆಸ್ಟ್ರೇಲಿಯಾಗೆ ವಾಪಾಸಾಗಿದ್ದಾರೆ.
ಇನ್ನು ಪ್ಯಾಟ್ ಕಮ್ಮಿನ್ಸ್ ಇತ್ತೀಚೆಗಷ್ಟೇ ಭಾರತದಲ್ಲಿ ಹೆಚ್ಚಾಗಿರುವ ಕೊರೊನಾ ವೈರಸ್ ಪ್ರಕರಣದ ವಿರುದ್ಧ ಹೋರಾಡಲು 50,000 ಡಾಲರ್ ಮೊತ್ತವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುವ ಘೋಷಣೆ ಮಾಡಿದ್ದರು.