ಲಂಡನ್, ಆಗಸ್ಟ್ 12: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ ಅಂಗಳದಲ್ಲಿ ಗುರುವಾರ ಆರಂಭವಾಗಿದೆ. ಈ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ತೆರಳಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಗಂಗೂಲಿ ಹಾಗೂ ಜಯ್ ಶಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಅವರ ಪಕ್ಕದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಜೋಫ್ರಿ ಬಾಯ್ಕಾಟ್ ಅವರೊಂದಿಗೆ ನಿಂತು ಸಂವಾದವನ್ನು ನಡೆಸುತ್ತಿದ್ದರು.
ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತದ ವಿರುದ್ಧ ಮುನ್ನಡೆ ಸಾಧಿಸಲು 4 ಅಂಶಗಳ ಮೇಲೆ ಇಂಗ್ಲೆಂಡ್ ಚಿತ್ತ
ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಗೆದ್ದಿದ್ದು ಮೊದಲಿಗೆ ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಎರಡನೇ ಪಂದ್ಯ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿದೆ. ಇದಕ್ಕೂ ಮುನ್ನ ನಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆದಿದ್ದು ಪಂದ್ಯ ಮಳೆಯಿಂದಾಗಿ ಡ್ರಾ ಫಲಿತಾಂಶವನ್ನು ಕಂಡಿತ್ತು. ಪಂದ್ಯದಲ್ಲಿ ಭಾರತ ಅದ್ಭುತ ಆಟವನ್ನು ಪ್ರದರ್ಶಿಸಿ ಗೆಲುವಿನ ಸನಿಹಕ್ಕೆ ತಲುಪಿತ್ತು ಆದರೆ ಅಂತಿಮ ದಿನದಾಟದಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ಪಂದ್ಯ ಮುಂದುವರಯಲು ಅವಕಾಶವೇ ದೊರೆಯಲಿಲ್ಲ. ಹೀಗಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇನ್ನು ಈ ಪಂದ್ಯಕ್ಕೂ ಕೂಡ ಆರಂಭದಿಂದಲೂ ಮಳೆ ಅಡ್ಡಿ ಪಡಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಸುರಿದ ಪರಿಣಾಮವಾಗಿ ತಡವಾಗಿ ಪಂದ್ಯ ಆರಂಭವಾಯಿತು. ಭಾರತ ಉತ್ತಮ ಆರಂಭವನ್ನು ಪಡೆದಿದ್ದು ಆರಂಭಿಕರಿಬ್ಬರು ಉತ್ತಮ ಜೊತೆಯಾಟವನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮತ್ತೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಸಂದರ್ಭದಲ್ಲಿ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೆ 46 ರನ್ಗಳಿಸಿತ್ತು.
ಇನ್ನು ಈ ಪಂದ್ಯದಲ್ಲಿ ಭಾರತ ತನ್ನ ಲೈನ್ಅಪ್ನಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವೇಗಿ ಶಾರ್ದೂಲ್ ಠಾಕೂರ್ ಗಾಯಗೊಂಡ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಟೀಮ್ ಇಂಡಿಯಾದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾಗೆ ಸ್ಥಾನವನ್ನು ನೀಡಲಾಗಿದೆ. ಈ ಮೂಲಕ ಲಾರ್ಡ್ಸ್ ಪಂದ್ಯದಲ್ಲಿಯೂ ಭಾರತ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿದಿದೆ.
ಇನ್ನು ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಹಸೀಬ್ ಹಮೀದ್, ಮೊಯೀನ್ ಅಲಿ ಹಾಗೂ ಮಾರ್ಕ್ ವುಡ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು ಜಾಕ್ ಕ್ರಾವ್ಲೆ, ಡಾನ್ ಲಾರೆನ್ಸ್ ಮತ್ತು ಸ್ಟುವರ್ಟ್ ಬ್ರಾಡ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ವೇಗಿ ಸ್ಟುವರ್ಟ್ ಬ್ರಾಡ್ ಗಾಯಗೊಂಡಿರುವ ಕಾರಣದಿಂದಾಗಿ ಭಾರತದ ವಿರುದ್ಧದ ಈ ಸರಣಿಯ ಎಲ್ಲಾ ಪಂದ್ಯಗಳಿಂದಲೂ ಹೊರಬಿದ್ದಿದ್ದಾರೆ. ಅನುಭವಿ ವೇಗಿ ಕೂಡ ಗಾಯದಿಂದಾಗಿ ಅಲಭ್ಯವಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಗಾಯದ ಪ್ರಮಾಣ ಗಂಭೀರವಲ್ಲದ ಕಾರಣದಿಂದಾಗಿ ಲಾರ್ಡ್ಸ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಆಂಡರ್ಸನ್ ಕಾಣಿಸಿಕೊಂಡಿದ್ದಾರೆ.
ಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿ
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಭಾರತ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.