ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಮೊದಲ ಪಂದ್ಯದಲ್ಲೇ ಎರಡೂ ತಂಡಗಳಿಗೂ ಪ್ರಮುಖ ಆಟಗಾರರ ಗೈರು ಕಾಡುತ್ತಿದೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ಟಾಮ್ ಲಾಥಮ್ ನಾಯಕತ್ವ ವಹಿಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ಸ್ಟೋಕ್ಸ್ ಕೂಡ ಉದ್ಘಾಟನಾ ಪಂದ್ಯದಿಂದ ಹೊರಗುಳಿದಿದ್ದಾರೆ.

ಕೇನ್ ವಿಲಿಯಮ್ಸನ್ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದರು. ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ಗಾಗಿ ಆಡುವಾಗ ಅವರು ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿದ್ದು, ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು. ಕೈ ನೋವಿನಿಂದ ಬಳಲುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅವರಿಗೆ ಮೊದಲನೇ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ.
ಕೇನ್ ವಿಲಿಯಮ್ಸ್ಗೆ ವಿಶ್ರಾಂತಿ ನೀಡಿದ ಬಗ್ಗೆ ಮಾತನಾಡಿದ ಟಾಮ್ ಲಾಥಮ್ "ಕೇನ್ ವಿಲಿಯಮ್ಸ್ ಆಡದೇ ಇರುವುದು ತಂಡಕ್ಕೆ ಹಿನ್ನಡೆ ಎಂದು ಭಾವಿಸುತ್ತೇನೆ, ಆತ ತಂಡದಲ್ಲಿ ಇರಬೇಕು ಎಂದು ನಾವು ಬಯಸುತ್ತೇವೆ. ಗಾಯಗೊಂಡ ಬಳಿಕ ನಾಲ್ಕೈದು ತಿಂಗಳು ಅವರು ಯಾವ ರೀತಿ ಚೇತರಿಸಿಕೊಂಡು ಮರಳಿದ್ದಾರೆ ಎನ್ನುವುದಕ್ಕೆ ಅವರು ಮಾಡಿದ ಕೆಲಸ ಸಾಕ್ಷಿಯಾಗಿದೆ" ಎಂದರು.
"ಅವರು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಕೊನೆಯ ಎರಡು ಅಭ್ಯಾಸ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಎರಡು ದಿನಗಳ ಹಿಂದೆ ಅವರು ಮೈದಾನದಲ್ಲಿ ಅಭ್ಯಾಸ ಮಾಡಿದ್ದಾರೆ, ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದರು.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ತಪ್ಪಿಸಿಕೊಂಡರು, ಅಕ್ಟೋಬರ್ 9ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.
ವಿಲಿಯಮ್ಸನ್ ನ್ಯೂಜಿಲೆಂಡ್ ತಂಡಕ್ಕೆ ನಿರ್ಣಾಯಕ ಬ್ಯಾಟರ್ ಆಗಿದ್ದಾರೆ. 2019 ರ ವಿಶ್ವಕಪ್ನಲ್ಲಿ ಅವರು ನ್ಯೂಜಿಲೆಂಡ್ನ ಪ್ರಮುಖ ರನ್-ಸ್ಕೋರರ್ ಆಗಿದ್ದರು, ಒಂಬತ್ತು ಇನ್ನಿಂಗ್ಸ್ಗಳಲ್ಲಿ 82.57 ಸರಾಸರಿಯಲ್ಲಿ ಎರಡು ಶತಕ ಮತ್ತು ಅರ್ಧ ಶತಕಗಳನ್ನು ಒಳಗೊಂಡಂತೆ 578 ರನ್ಗಳನ್ನು ಗಳಿಸಿದರು.
ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದ ಬೆನ್ಸ್ಟೋಕ್ಸ್ ವಿಶ್ವಕಪ್ಗೆ ನಿವೃತ್ತಿಯನ್ನು ಹಿಂಪಡೆದು ಇಂಗ್ಲೆಂಡ್ ತಂಡಕ್ಕೆ ಮರಳಿದ್ದರು. ಆದರೆ ಮೊದಲನೇ ಪಂದ್ಯದಲ್ಲೇ ಅವರು ಗಾಯದ ಕಾರಣ ಬೆಂಚ್ ಕಾಯುವಂತಾಗಿದೆ. ಸೊಂಟದ ಗಾಯದಿಂದ ಬಳಲುತ್ತಿದ್ದು, ಇನ್ನೂ ಚೇತರಿಸಿಕೊಳ್ಳುತ್ತಿರುವ ಕಾರಣ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವೇ ಅವರು ಕಣಕ್ಕಿಳಿಯಲಿದ್ದಾರೆ.