
ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿರುವ ಟೆಸ್ಟ್ ತಂಡದಲ್ಲಿ ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ಗೆ ವಿಶ್ರಾಂತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ನಾಸಿರ್ ಹುಸೇನ್, ಮೈಕಲ್ ವಾನ್ ಹಾಗೂ ಕೆವಿನ್ ಪೀಟರ್ಸನ್ ಸಹಿತ ಅಭಿಮಾನಿಗಳು ಆಕ್ಷೇಪವೆತ್ತಿದ್ದರು. ಇದು ಎದುರಾಳಿ ಆತಿಥೇಯ ಟೀಮ್ ಇಂಡಿಯಾಗೆ ಅಗೌರವ ತೊರಿದಂತೆ ಎಂದು ಪೀಟರ್ಸನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಗ್ಗೆ ಚರ್ಚೆಗಳು ಆರಂಭವಾಯಿತು.
ಆದರೆ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೈರ್ಸ್ಟೋವ್ಗೆ ವಿಶ್ರಾಂತಿಯನ್ನು ನೀಡಿರುವ ಆಯ್ಕೆಗಾರರ ಕ್ರಮವನ್ನು ಇಂಗ್ಲೆಂಡ್ ತಂಡದ ಕೋಚ್ ಕ್ರೀಸ್ ಸಿಲ್ವರ್ವುಡ್ ಸಮರ್ಥನೆ ಮಾಡಿಕೊಂಡಿದ್ದಾರೆ. ತಂಡದ ಬಹುಮಾದರಿಯ ವಿಕೆಟ್ ಕೀಪರ್ಅನ್ನು ಕಾಪಾಡಿಕೊಳ್ಳಲು ಈ ಕ್ರಮ ಅಗತ್ಯವಾಗಿದೆ. ಹೀಗಾಗಿ ಆಯ್ಕೆಗಾರರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಇಂಗ್ಲೆಂಡ್ ತಂಡದ ಕೋಚ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಜಾನಿ ಬೈರ್ಸ್ಟೋವ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಅವರಿಗೆ ಈಗ ಮನೆಯಲ್ಲಿ ಉತ್ತಮ ಸಮಯವನ್ನು ಕಳೆಯಲು ಅವಕಾಶವನ್ನು ನೀಡಲಾಗಿದೆ" ಎಂದು ಇಂಗ್ಲೆಂಡ್ ಕೋಚ್ ಕ್ರೀಸ್ ಸಿಲ್ವರ್ವುಡ್ ಹೇಳಿದ್ದಾರೆ.
"ಕೊರೊನಾ ಕಾಲವಾದ್ದರಿಂದ ನಾವು ಜೈವಿಕ ವಲಯದಲ್ಲಿದ್ದು ಹೆಚ್ಚಿನ ಸಮಯವನ್ನು ಹೋಟೆಲ್ನ ರೂಮ್ನಲ್ಲಿ ಕಳೆಯಬೇಕಾಗಿದೆ. ಇದು ಸುಲಭವಲ್ಲ. ಹೀಗಾಗಿ ನಮ್ಮ ಆಟಗಾರರ ಬಗ್ಗೆ ನಾವು ಗಮನಿಸಿಕೊಳ್ಳಬೇಕು ಎಂದು ನಾವು ನಿರ್ಧರಿಸಿದ್ದೇವೆ ಹಾಗೂ ಆ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ. ಪ್ರತಿ ಆಟಗಾರನ ಹಿತದೃಷ್ಟಿಯಿಂದ ಇದು ಉತ್ತಮ ನಿರ್ಧಾರವಾಗಿದೆ" ಎಂದು ಇಂಗ್ಲೆಂಡ್ ತಂಡದ ಕೋಚ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಕ್ರಿಸ್ ಸಿಲ್ವರ್ವುಡ್ "ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಸಾಧಿಸಿದ ಅದ್ಭುತ ಸರಣಿ ಗೆಲುವಿನಿಂದಾಗಿ ತಾನು ಅತ್ಯಂತ ಕಠಿಣ ತಂಡ ಎಂಬುದನ್ನು ಖಚಿತಪಡಿಸಿದೆ. ಆದರೆ ನಮ್ಮ ತಂಡಕ್ಕೆ ಟೀಮ್ ಇಂಡಿಯಾವನ್ನು ಸೋಲಿಸುವ ಸಾಮರ್ಥ್ಯವಿದೆ. ಭಾರತವನ್ನು ಭಾರತ ತಂಡದ ನೆಲದಲ್ಲಿ ಸೋಲಿಸುವ ಮೂಲಕ ಇಂಗ್ಲೆಂಡ್ ತಂಡ ತನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಸಿಕೊಳ್ಳಲಿದೆ" ಎಂದು ಹೇಳಿದ್ದಾರೆ.