
ನವದೆಹಲಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 9ರಿಂದ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಕಳೆದ ಬಾರಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದ ಯುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯೂ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಯೋಚಿಸುತ್ತಿದೆ.
ಭಾರತದ ವಿರುದ್ಧ ಸರಣಿಗಾಗಿ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ಕ್ರಿಕೆಟರ್ ಸ್ಯಾಮ್ ಬಿಲ್ಲಿಂಗ್ಸ್, ಪ್ರವಾಸ ಸರಣಿ ಮುಕ್ತಾಯದ ಬಳಿಕ ಭಾರತದಲ್ಲಿದ್ದು, ಐಪಿಎಲ್ಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿಯ ಸೀಸನ್ನಲ್ಲಿ ಬಿಲ್ಲಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಬಿಲ್ಲಿಂಗ್ಸ್ ಅಸಲಿಗೆ 2016 ಮತ್ತು 2017ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಆದರೆ ಮಧ್ಯದಲ್ಲಿ ಬೇರೆ ಫ್ರಾಂಚೈಸಿಗಳಿಗೆ ಆಡಿದ್ದ ಸ್ಯಾಮ್ ಅವರನ್ನು ಈ ಬಾರಿಯ ಹರಾಜಿನ ವೇಳೆ ಡಿಸಿ ಅವರ ಮೂಲ ಬೆಲೆಯಾದ 2 ಕೋ.ರೂ.ಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಡೆಲ್ಲಿಗೆ ಮರಳಿರುವ ಸ್ಯಾಮ್ ಭಾರತ ತಂಡದಲ್ಲಿರುವ ಬೆಸ್ಟ್ ಯುವ ಆಟಗಾರನನ್ನು ಹೆಸರಿಸಿದ್ದಾರೆ.
'ನಾನು ಮೊದಲ ಬಾರಿಗೆ ರಿಷಭ್ ಪಂತ್ ಅವರನ್ನು ನೋಡಿದ್ದನ್ನು ನೆನಪಿಸಿಕೊಳ್ಳಬಲ್ಲೆ. ನಾವು ಅಭ್ಯಾಸ ಮಾಡುತ್ತಿದ್ದಾಗ ಆತ ಕ್ರಿಸ್ ಮೋರಿಸ್, ನೇಥನ್ ಕೌಲ್ಟರ್ ನೈಲ್ ಅವರಂತ ಬೌಲರ್ಗಳಿಗೆ ಚಚ್ಚುತ್ತಿದ್ದರು. ಆಗ ನಾನು ರಾಹುಲ್ ದ್ರಾವಿಡ್ (ಆಗ ಡೆಲ್ಲಿಯ ಮಾರ್ಗದರ್ಶಿ) ಅವರನ್ನು ಹೇಳಿದೆ, 'ಯಾರೀತ?, ಬಹುಶಃ ಭಾರತದ ಬೆಸ್ಟ್ ಯುವ ಆಟಗಾರನಿರಬೇಕು ಎಂದು ಆಗ ನಾನು ಉದ್ಘರಿಸಿದ್ದೆ,' ಎಂದು ಸ್ಯಾಮ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಬಿಲ್ಲಿಂಗ್ಸ್, 'ಈಗ ಪಂತ್ ತಾನು ಯಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಆತ ಭಾರತದ ಜೆರ್ಸಿ ಅಥವಾ ಡೆಲ್ಲಿ ಜೆರ್ಸಿ ಧರಿಸಿದಾಗ ಏನು ಮಾಡುತ್ತಿದ್ದಾರೆ ಅನ್ನೋದನ್ನು ನಾವು ನೋಡುತ್ತಿದ್ದೇವೆ,' ಎಂದಿದ್ದಾರೆ. ಡೆಲ್ಲಿ ಎಂದಿನ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡಿರುವುದರಿಂದ ಅವರ ಜಾಗಕ್ಕೆ ರಿಷಭ್ ಪಂತ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ.