'ಭಾರತ ವಿರುದ್ಧ ತಿರುಗಿಬೀಳಲು ಇಂಗ್ಲೆಂಡ್ಗೆ ಸೂಪರ್ಮ್ಯಾನ್ ಶಕ್ತಿ ಬೇಕು'

ಲಂಡನ್: ಟೀಮ್ ಇಂಡಿಯಾದ ಹಿಂದಿನ ಇಂಗ್ಲೆಂಡ್ ಪ್ರವಾಸ ಗಮನಿಸಿದರೆ ಈ ಬಾರಿ ಭಾರತೀಯ ತಂಡ ಇನ್ನೂ ಬಲಿಷ್ಠ ತಂಡವಾಗಿ ಕಾಣಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನದಲ್ಲಿದೆ. ಸದ್ಯಕ್ಕೆ ಭಾರತಕ್ಕಿರುವ ವೀಕ್ ಪಾಯಿಂಟ್ ಅಂದ್ರೆ ಮಧ್ಯಮ ಬ್ಯಾಟಿಂಗ್ ಕ್ರಮಾಂಕ. ಅದೊಂದು ಸರಿಯಾದರೆ ಈ ಬಾರಿ ಇಂಗ್ಲೆಂಡ್ನಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲೋದು ಪಕ್ಕ. ಈಗಾಗಲೇ ವಿರಾಟ್ ಕೊಹ್ಲಿ ಪಡೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.
ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್ನಲ್ಲೇ ಗೆಲ್ಲುವ ಎಲ್ಲಾ ಸಾಧ್ಯತೆಗಳಿತ್ತು. ಆದರೆ ನಾಟಿಂಗ್ಹ್ಯಾಮ್ನಲ್ಲಿ ನಡೆದಿದ್ದ ಮೊದಲ ಪಂದ್ಯ ಮಳೆಯಿಂದಾಗಿ ಆಗಾಗ ನಿಲುಗಡೆಯಾಗಿ ಅಂತಿಮವಾಗಿ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು. ಆದರೆ ಲಂಡನ್ನ ಲಾರ್ಡ್ಸ್ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ನಲ್ಲಿ ಭಾರತ ವೀರೋಚಿತ ಹೋರಾಟದೊಂದಿಗೆ ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ಗೆಲ್ಲಲೇ ಬೇಕನ್ನೋ ಹಪಹಪಿಯಲ್ಲಿ ದ್ವಿತೀಯ ಟೆಸ್ಟ್ ಆಡಿದ್ದ ಭಾರತ
ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಇಡೀ ಒಂದು ತಂಡವಾಗಿ ಆಡಿತ್ತು. ಪಂದ್ಯ ಗೆಲ್ಲಲೇಬೇಕು ಎನ್ನುವ ಹಪಹಪಿ ತಂಡದಲ್ಲಿದ್ದಂತೆ ಕಾಣಿಸಿತ್ತು. ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಬೌಲರ್ಗಳು ಹೊಣೆ ಹೊತ್ತು ವೀರೋಚಿತ ಆಟ ನೀಡಿದ್ದರು. ಇದೇ ಕಾರಣಕ್ಕೆ ದ್ವಿತೀಯ ಟೆಸ್ಟ್ನಲ್ಲಿ ಭಾರತ 151 ಭರ್ಜರಿ ರನ್ಗಳ ಜಯ ಗಳಿಸಿತ್ತು. ಅಸಲಿಗೆ ಆ ಪಂದ್ಯದ ಆರಂಭಿಕ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 27 ರನ್ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಭಾರತದ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬೂಮ್ರಾ 90 ರನ್ ಜೊತೆಯಾಟ ನೀಡಿದ್ದರು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ದಾಳಿ ಕೂಡ ನೀಡಿದ್ದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಜೋ ರೂಟ್ ಪಡೆ ಸೋತು ನಿರಾಸೆ ಅನುಭವಿಸಿತ್ತು.
ಇಂಗ್ಲೆಂಡ್ ಗೆಲ್ಲಬೇಕಾದರೆ ಸೂಪರ್ಮ್ಯಾನ್ ಶಕ್ತಿ ಬೇಕು
ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಜೋ ರೂಟ್ ಇನ್ನಿಂಗ್ಸ್ ಮೇಲೆ ಅವಲಂಬಿತಾಗಿದೆ ಎಂದು ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. 'ದ ಟೆಲಿಗ್ರಾಫ್ ಇಂಡಿಯಾ'ದ ಇತ್ತೀಚಿನ ಕಾಲಂನಲ್ಲಿ ಗವಾಸ್ಕರ್, ಮುಂಬರುವ ಟೆಸ್ಟ್ಗಳಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಪ್ರವಾಸಿ ಭಾರತದ ವಿರುದ್ಧ ತಿರುಗಿ ಬೀಳಬೇಕಾದರೆ ಅವರು ಸೂಪರ್ಮ್ಯಾನ್ ಪ್ರಯತ್ನ ಮಾಡಬೇಕಾಗುತ್ತದೆ ಎಂದಿದ್ದಾರೆ. 'ಪಂದ್ಯ ಕೊನೇಯ ದಿನವಾದ ಐದನೇ ದಿನ ಇಂಗ್ಲೆಂಡ್ ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕೊನೇ ದಿನ ಪಿಚ್ ಭಾರತದ ಪರವಾಗಿತ್ತು. ಆ ದಿನ ಭಾರತ ಇಂಗ್ಲೆಂಡ್ಗೆ ಬರೀ 180 ರನ್ ಗುರಿ ಇದ್ದಿದ್ದರೂ ಇಂಗ್ಲೆಂಡ್ಗೆ ಕಷ್ಟವಾಗುತ್ತಿತ್ತು. ಆದರೆ ಇಂಗ್ಲೆಂಡ್ ಕೇವಲ 121 ರನ್ಗೆ ಆಲ್ ಔಟ್ ಆಯ್ತು. ಅವರ ಬ್ಯಾಟಿಂಗ್ ಬರೀ ಜೋ ರೂಟ್ ಅವರನ್ನು ಅವಲಂಭಿಸಿದೆ. ಅವರು ಒಂದು ವೇಳೆ ಇನ್ನಿಂಗ್ಸ್ ಹಿಡಿದಿಟ್ಟುಕೊಳ್ಳದಿದ್ದರೆ ಆ ಜವಾಬ್ದಾರಿ ವೇಗಿಗಳ ಕೈಗೆ ಹೋಗುತ್ತದೆ," ಎಂದು ಕಾಲಂನಲ್ಲಿ ಗವಾಸ್ಕರ್ ಹೇಳಿದ್ದಾರೆ.
ಇಂಗ್ಲೆಂಡ್ ಒಂದುವೇಳೆ ಟೆಸ್ಟ್ ಸರಣಿ ಗೆದ್ದರೆ ಪವಾಡವಾಗುತ್ತದೆ
"ಭಾರತವು ಇಂಗ್ಲೆಂಡಿಗೆ ಮಾನಸಿಕ ಹೊಡೆತ ನೀಡಿದೆ. ಸರಣಿಯಲ್ಲಿ ಮರಳಿ ಬರಲು ಆತಿಥೇಯ ತಂಡವು ಅತಿಮಾನುಷ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಹೌದು, ಕ್ರಿಕೆಟ್ ಅನ್ನೋದು ಒಂದು ಅನಿಶ್ಚಿತತೆಯ ಆಟವಾಗಿದೆ ಮತ್ತು ಇಲ್ಲಿ ವಿಷಯಗಳು ಸಾಕಷ್ಟು ನಾಟಕೀಯವಾಗಿ ತಿರುಗಬಹುದು. ಆದರೆ ಇಲ್ಲಿ ಮಾತ್ರ ಇಂಗ್ಲೆಂಡ್ ಇನ್ನು ಟೆಸ್ಟ್ ಸರಣಿ ಗೆಲ್ಲಬೇಕಾದರೆ ಪವಾಡ ನಡೆಯಬೇಕಷ್ಟೇ," ಎಂದು ಗವಾಸ್ಕರ್ ಅಭಿಪ್ರಾಯಿಸಿದ್ದಾರೆ. ದ್ವಿತೀಯ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ರೋಹಿತ್ ಶರ್ಮಾ 82, ಕೆಎಲ್ ರಾಹುಲ್ 129 ರನ್ನೊಂದಿಗೆ 126.1 ಓವರ್ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ಭಾರತದ ದ್ವಿತೀಯ ಇನ್ನಿಂಗ್ಸ್ನಲ್ಲಿ 109.3 ಓವರ್ಗೆ 8 ವಿಕೆಟ್ ಕಳೆದು 298 ರನ್ ಗಳಿಸಿತ್ತು. ಇಂಗ್ಲೆಂಡ್ ಗೆಲುವಿಗೆ 272 ರನ್ ಗುರಿ ನೀಡಲಾಗಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 128 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ 51.5 ಓವರ್ಗೆ ಎಲ್ಲಾ ವಿಕೆಟ್ ಕಳೆದು 120 ರನ್ ಬಾರಿಸಿ 151 ರನ್ನಿಂದ ಶರಣಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications