
ಬೆಂಗಳೂರು, ಸೆಪ್ಟೆಂಬರ್ 22: ಇಂಗ್ಲೆಂಡ್ ವಿರುದ್ಧ ಭಾರತ ಸರಣಿ ಸೋತಾಗಿದೆ. ಗೆಲ್ಲುವ ಅಪೂರ್ವ ಅವಕಾಶ ಕೈತಪ್ಪಿದ್ದಾಗಿದೆ. ಆದರೆ ಮುಂಬರಲಿರುವ ಪ್ರವಾಸ ಪಂದ್ಯಕ್ಕಾಗಿ ಭಾರತದ ಬ್ಯಾಟ್ಸ್ಮನ್ ಗಳು ಉತ್ತಮ ತಯಾರಿ ನಡೆಸಲೇಬೇಕು ಎಂದು ಮಾಜಿ ಕ್ರಿಕೆಟಿಗ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ ತಂಡದ ಕೊನೆಯ ನಾಯಕ ಕೀರ್ತಿಗೆ ಪಾತ್ರರಾಗಿರುವ ದ್ರಾವಿಡ್, ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ vs ಭಾರತ ಟೆಸ್ಟ್ ಸರಣಿಯಲ್ಲಿ ಭಾರತದ ಸೋಲಿನ ಬಗ್ಗೆ ದೆಹಲಿಯಲ್ಲಿ ಅಭಿಪ್ರಾಯ ಹಂಚಿಕೊಂಡರು. ರಾಹುಲ್ ನಾಯಕತ್ವದಲ್ಲಿ 2007ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ತಂಡ ಟೆಸ್ಟ್ ಸರಣಿಯನ್ನು ಗೆದ್ದಿತ್ತು.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಂಗ್ಲೆಂಡ್ ನಲ್ಲಿನ ಪರಿಸ್ಥಿತಿಗಳು ಬ್ಯಾಟಿಂಗ್ ಗೆ ಕಷ್ಟಕರವಾಗಿರುತ್ತವೆ. ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಸುಲಭವಲ್ಲ. ನನಗನ್ನಿಸಿದಮಟ್ಟಿಗೆ ಕಳೆದ ಟೆಸ್ಟ್ ಸರಣಿ ವೇಳೆ ಎರಡೂ ತಂಡಗಳ ಬ್ಯಾಟ್ಸ್ಮನ್ ಗಳೂ ಹೆಣಗಾಡಿದ್ದಾರೆ' ಎಂದು ದ್ರಾವಿಡ್ ವಿಶ್ಲೇಷಿಸಿದರು.
'ಟೆಸ್ಟ್ ಸರಣಿ ಸೋತಿದ್ದಾಗಿದೆ. ನಾವೀಗ ಮುಂದೆ ನೋಡಬೇಕಿದೆ. ಮುಂದಿನಬಾರಿ ಇಂಥ ಪ್ರವಾಸದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಾವು ಸಾಧ್ಯವಾದಷ್ಟೂ ಉತ್ತಮ ತಯಾರಿ ನಡೆಸಲೇಬೇಕು. ಅತ್ಯುತ್ತಮ ತಯಾರಿಯಿಂದ ಮಾತ್ರ ಇಂಗ್ಲೆಂಡ್ ನಂತ ಕಷ್ಟಕರ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಸಾಧ್ಯ' ಎಂದು 'ಗ್ರೇಟ್ ವಾಲ್ ಆಫ್ ಇಂಡಿಯಾ' ಖ್ಯಾತಿಯ ದ್ರಾವಿಡ್ ಹೇಳಿದರು.