ಬೆಂಗಳೂರು, ಜುಲೈ 01: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೃನಾಲ್ ಪಾಂಡ್ಯ ಹಾಗೂ ದೀಪಕ್ ಚಾಹರ್ ಅವರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿದೆ. ಜುಲೈ 3ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಪ್ರಕಟಿಸಿದ್ದ ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಮುಂಚೆ ತಂಡಕ್ಕೆ ಆಯ್ಕೆಯಾಗಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ವೇಗಿ ಜಸ್ ಪ್ರೀತ್ ಬೂಮ್ರಾ ಅವರ ಬದಲಿಗೆ ಪಾಂಡ್ಯ ಹಾಗೂ ಚಾಹರ್ ಆಯ್ಕೆಯಾಗಿದ್ದಾರೆ. ಸುಂದರ್ ಹಾಗೂ ಬೂಮ್ರಾ ಇಬ್ಬರು ಗಾಯಗೊಂಡು ಸರಣಿಯಿಂದ ಹೊರ ಬಿದ್ದಿದ್ದಾರೆ.
ರಾಜಸ್ಥಾನದ ವೇಗಿ ದೀಪಕ್ ಚಾಹರ್ ಅವರು 5 ಲಿಸ್ಟ್ ಎ ಪಂದ್ಯಗಳಲ್ಲಿ 13 ವಿಕೆಟ್ ಕಿತ್ತಿದ್ದು, ಉತ್ತಮ ಲಯದಲ್ಲಿದ್ದಾರೆ. ಇಂಡಿಯಾ ಎ ಪರ ಆಡಿ ಮೂರು ಪಂದ್ಯಗಳಿಂದ 7 ವಿಕೆಟ್ ಗಳಿಸಿದ್ದಾರೆ.
ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಬೂಮ್ರಾ ಅವರು ಐರ್ಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಸುಂದರ್ ಅವರು ಫುಟ್ಬಾಲ್ ಆಡುವಾಗ ಅವರು ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.