
ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವ ಯೋಚನೆಯನ್ನು ಕೂಡ ಮಾಡಿಲ್ಲ
ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆದರೆ ಉತ್ತಮ ಎಂಬುದರ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ದ್ರಾವಿಡ್ ಈ ರೀತಿಯ ಯೋಚನೆಯನ್ನೇ ನಾನು ಮಾಡಿಲ್ಲ ಎಂದು ಉತ್ತರ ನೀಡಿದ್ದಾರೆ. ಸದ್ಯ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಕ್ರಿಕೆಟ್ ಜಗತ್ತಿಗೆ ಉತ್ತಮ ಕ್ರಿಕೆಟಿಗರನ್ನು ನೀಡುವ ಕಾಯಕದಲ್ಲಿ ತೊಡಗಿಕೊಂಡಿರುವ ರಾಹುಲ್ ದ್ರಾವಿಡ್ ತಮ್ಮ ಕೆಲಸದ ಬಗ್ಗೆ ಹೆಮ್ಮೆ ಇದೆ ಹೀಗಾಗಿ ಇದರಲ್ಲೇ ನನಗೆ ಹೆಚ್ಚಿನ ಸಂತೋಷ ಸಿಗುತ್ತದೆ ಎನ್ನುತ್ತಾರೆ. ಈ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುವುದರಲ್ಲಿ ನೆಮ್ಮದಿಯಿದೆ, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ ಹಾಗೂ ಅದರ ಈ ಕುರಿತು ಹೆಚ್ಚಿನ ಮಾಹಿತಿ ಕೂಡ ನನ್ನ ಬಳಿ ಇಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ನಂತರ ಮುಗಿಯಲಿದೆ ರವಿಶಾಸ್ತ್ರಿ ಕಾಲ
ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಈ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಯಲಿದ್ದಾರೆ. ಹಲವು ವರ್ಷಗಳಿಂದ ಯಶಸ್ವಿಯಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿಕೊಂಡು ಬಂದಿರುವ ರವಿಶಾಸ್ತ್ರಿ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ನಂತರ ಹೊಸದಾಗಿ ಕೋಚ್ ಆಯ್ಕೆ ನಡೆಯಲಿದ್ದು ಈ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಸರಿಯಾದ ವ್ಯಕ್ತಿ ಎಂದು ಸಾಕಷ್ಟು ಹಿರಿಯ ಕ್ರಿಕೆಟಿಗರು ಮತ್ತು ಯುವ ಕ್ರಿಕೆಟಿಗರು ಸಹ ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ತಿಳಿಸಿದ್ದಾರೆ.

ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಸೋಲಿನ ನಂತರ ದ್ರಾವಿಡ್ ಹೇಳಿದ್ದಿಷ್ಟು
ಲಂಕಾ ವಿರುದ್ಧ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಟಿ ಟ್ವೆಂಟಿ ಸರಣಿಯನ್ನು ಕೈಚೆಲ್ಲಿತು. ಕೊರೋನಾವೈರಸ್ ಕಾರಣದಿಂದಾಗಿ ತಂಡದ ಪ್ರಮುಖ ಆಟಗಾರರು ಹೊರಗುಳಿದ ಕಾರಣದಿಂದ ಟಿ ಟ್ವೆಂಟಿ ಸರಣಿಯನ್ನು ಟೀಮ್ ಇಂಡಿಯಾ ಸೋತಿತು ಎಂದರೆ ಅಕ್ಷರಶಃ ತಪ್ಪಾಗಲಾರದು. ಹೀಗೆ ಶ್ರೀಲಂಕಾ ವಿರುದ್ಧ ಟಿ ಟ್ವೆಂಟಿ ಸರಣಿ ಸೋತ ನಂತರ ತಮ್ಮ ತಂಡದ ಯುವ ಆಟಗಾರರ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ 'ಈ ಯುವ ಆಟಗಾರರು ಇನ್ನೂ ಚಿಕ್ಕವರು, ಬಿಸಿ ರಕ್ತದ ಯುವಕರು, ಆಡಿದ ಮೊದಲ ಪಂದ್ಯದಲ್ಲಿಯೇ ದೊಡ್ಡ ಮಟ್ಟದ ಇನ್ನಿಂಗ್ಸ್ ನಿರೀಕ್ಷೆ ಮಾಡುವುದು ತಪ್ಪು, ನಾವೂ ಕೂಡ ಆರಂಭದ ದಿನಗಳಲ್ಲಿ ಈ ರೀತಿಯ ಕಷ್ಟಗಳನ್ನು ಎದುರಿಸಿ ಮೇಲೆ ಬಂದವರು. ಹೀಗಾಗಿ ಯುವ ಆಟಗಾರರಿಗೆ ಒಂದಷ್ಟು ಪಂದ್ಯಗಳ ಕಾಲಾವಕಾಶ ನೀಡಬೇಕು, ನಂತರವಷ್ಟೆ ಈ ಯುವ ಆಟಗಾರರ ಅಸಲಿಯತ್ತು ನಿಮಗೆ ತಿಳಿಯಲಿದೆ' ಎಂದು ರಾಹುಲ್ ದ್ರಾವಿಡ್ ಯುವ ಆಟಗಾರರ ಪರ ಮಾತನಾಡಿದರು.


Click it and Unblock the Notifications
