ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವುದರ ಕುರಿತು ಮೌನ ಮುರಿದ ರಾಹುಲ್ ದ್ರಾವಿಡ್

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಸದ್ಯ ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಯಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಹಿರಿಯ ಆಟಗಾರರ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಕಾರಣ ಶಿಖರ್ ಧವನ್ ನೇತೃತ್ವದ ಯುವ ಆಟಗಾರರನ್ನೊಳಗೊಂಡ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲಾಗಿತ್ತು.
ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಕಾರಣ ರಾಹುಲ್ ದ್ರಾವಿಡ್ ಅವರನ್ನು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ತಂಡದ ಹೆಡ್ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿತ್ತು. ಹೀಗೆ ಹೆಚ್ಚು ಯುವ ಆಟಗಾರರಿಂದ ಕೂಡಿದ್ದ ಟೀಮ್ ಇಂಡಿಯಾ ತಂಡವನ್ನು ಶ್ರೀಲಂಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ತರಬೇತಿ ನೀಡಿ ಏಕದಿನ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ತರಬೇತಿ ನೀಡಿ ಉತ್ತಮ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ನೀಡಿ ಅಭ್ಯಾಸವಿರುವ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಯುವ ಆಟಗಾರರು ಶ್ರೀಲಂಕಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದರು ಎಂದರೆ ತಪ್ಪಾಗಲಾರದು.
ಆದರೆ ಟಿ ಟ್ವೆಂಟಿ ಸರಣಿಯಲ್ಲಿ ಕೊರೋನಾವೈರಸ್ ಕಾರಣದಿಂದಾಗಿ ಪ್ರಮುಖ ಆಟಗಾರರು ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾದಾಗ ಉಳಿದಿದ್ದ ಅನುಭವವಿಲ್ಲದ ಆಟಗಾರರನ್ನು ಇಟ್ಟುಕೊಂಡು ತಂಡವನ್ನು ರಚಿಸಿ ಉಳಿದ 2 ಟಿ ಟ್ವೆಂಟಿ ಪಂದ್ಯಗಳನ್ನೂ ಸಹ ಮುಗಿಸುವಲ್ಲಿ ರಾಹುಲ್ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದರು. ಹೀಗೆ ತಾನೊಬ್ಬ ಉತ್ತಮ ಕೋಚ್ ಎಂದು ಸಾಕಷ್ಟು ಬಾರಿ ನಿರೂಪಿಸಿಕೊಂಡಿರುವ ರಾಹುಲ್ ದ್ರಾವಿಡ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಕೋಚ್ ಆಗಿ ಆಯ್ಕೆಯಾಗುವುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ನಂತರ ರವಿಶಾಸ್ತ್ರಿಯವರ ತರಬೇತಿಯ ಅವಧಿ ಅಂತ್ಯವಾಗಲಿದ್ದು ತದನಂತರ ಟೀಮ್ ಇಂಡಿಯಾಕ್ಕೆ ಹೊಸ ಕೋಚ್ ನೇಮಕಾತಿ ನಡೆಯಲಿದೆ. ಹೀಗಾಗಿ ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ಭಾರತದ ತರಬೇತುದಾರನಾಗಿ ಆಯ್ಕೆಯಾದರೆ ಉತ್ತಮ ಎಂದು ಕ್ರಿಕೆಟ್ ಪ್ರೇಕ್ಷಕರು ಹಾಗೂ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ಸಾಕಷ್ಟು ಬಾರಿ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ 'ಸದ್ಯಕ್ಕೆ ನಾನು ಮುಂದಿನ ದಿನಗಳ ಕುರಿತು ಯಾವುದೇ ರೀತಿಯ ಯೋಜನೆಗಳನ್ನು ಹಾಕಿಕೊಂಡಿಲ್ಲ. ಈಗ ನಾನಿರುವ ಸ್ಥಾನವನ್ನು ನಾನು ಬಹಳ ಇಷ್ಟಪಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ ಟ್ವೆಂಟಿ ಸರಣಿಗಳು ಮುಗಿದಿದ್ದು ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಗೆದ್ದರೆ, ಟಿ ಟ್ವೆಂಟಿ ಸರಣಿಯಲ್ಲಿ ಶ್ರೀಲಂಕಾ ಜಯಭೇರಿ ಬಾರಿಸಿದೆ. ಹೀಗೆ ಲಂಕಾ ವಿರುದ್ಧದ ಸರಣಿಯಲ್ಲಿ ಸೋಲು ಮತ್ತು ಗೆಲವು ಎರಡನ್ನೂ ಕಂಡಿರುವ ಕೋಚ್ ರಾಹುಲ್ ದ್ರಾವಿಡ್ ತಮ್ಮ ತಂಡದ ಆಟಗಾರರು ಮತ್ತು ತಮ್ಮ ಮುಂದಿನ ಯೋಜನೆಗಳ ಕುರಿತು ಈ ಕೆಳಕಂಡಂತೆ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವ ಯೋಚನೆಯನ್ನು ಕೂಡ ಮಾಡಿಲ್ಲ
ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆದರೆ ಉತ್ತಮ ಎಂಬುದರ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ದ್ರಾವಿಡ್ ಈ ರೀತಿಯ ಯೋಚನೆಯನ್ನೇ ನಾನು ಮಾಡಿಲ್ಲ ಎಂದು ಉತ್ತರ ನೀಡಿದ್ದಾರೆ. ಸದ್ಯ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಕ್ರಿಕೆಟ್ ಜಗತ್ತಿಗೆ ಉತ್ತಮ ಕ್ರಿಕೆಟಿಗರನ್ನು ನೀಡುವ ಕಾಯಕದಲ್ಲಿ ತೊಡಗಿಕೊಂಡಿರುವ ರಾಹುಲ್ ದ್ರಾವಿಡ್ ತಮ್ಮ ಕೆಲಸದ ಬಗ್ಗೆ ಹೆಮ್ಮೆ ಇದೆ ಹೀಗಾಗಿ ಇದರಲ್ಲೇ ನನಗೆ ಹೆಚ್ಚಿನ ಸಂತೋಷ ಸಿಗುತ್ತದೆ ಎನ್ನುತ್ತಾರೆ. ಈ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುವುದರಲ್ಲಿ ನೆಮ್ಮದಿಯಿದೆ, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ ಹಾಗೂ ಅದರ ಈ ಕುರಿತು ಹೆಚ್ಚಿನ ಮಾಹಿತಿ ಕೂಡ ನನ್ನ ಬಳಿ ಇಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ನಂತರ ಮುಗಿಯಲಿದೆ ರವಿಶಾಸ್ತ್ರಿ ಕಾಲ
ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಈ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಯಲಿದ್ದಾರೆ. ಹಲವು ವರ್ಷಗಳಿಂದ ಯಶಸ್ವಿಯಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿಕೊಂಡು ಬಂದಿರುವ ರವಿಶಾಸ್ತ್ರಿ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ನಂತರ ಹೊಸದಾಗಿ ಕೋಚ್ ಆಯ್ಕೆ ನಡೆಯಲಿದ್ದು ಈ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಸರಿಯಾದ ವ್ಯಕ್ತಿ ಎಂದು ಸಾಕಷ್ಟು ಹಿರಿಯ ಕ್ರಿಕೆಟಿಗರು ಮತ್ತು ಯುವ ಕ್ರಿಕೆಟಿಗರು ಸಹ ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ತಿಳಿಸಿದ್ದಾರೆ.

ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿ ಸೋಲಿನ ನಂತರ ದ್ರಾವಿಡ್ ಹೇಳಿದ್ದಿಷ್ಟು
ಲಂಕಾ ವಿರುದ್ಧ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಟಿ ಟ್ವೆಂಟಿ ಸರಣಿಯನ್ನು ಕೈಚೆಲ್ಲಿತು. ಕೊರೋನಾವೈರಸ್ ಕಾರಣದಿಂದಾಗಿ ತಂಡದ ಪ್ರಮುಖ ಆಟಗಾರರು ಹೊರಗುಳಿದ ಕಾರಣದಿಂದ ಟಿ ಟ್ವೆಂಟಿ ಸರಣಿಯನ್ನು ಟೀಮ್ ಇಂಡಿಯಾ ಸೋತಿತು ಎಂದರೆ ಅಕ್ಷರಶಃ ತಪ್ಪಾಗಲಾರದು. ಹೀಗೆ ಶ್ರೀಲಂಕಾ ವಿರುದ್ಧ ಟಿ ಟ್ವೆಂಟಿ ಸರಣಿ ಸೋತ ನಂತರ ತಮ್ಮ ತಂಡದ ಯುವ ಆಟಗಾರರ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ 'ಈ ಯುವ ಆಟಗಾರರು ಇನ್ನೂ ಚಿಕ್ಕವರು, ಬಿಸಿ ರಕ್ತದ ಯುವಕರು, ಆಡಿದ ಮೊದಲ ಪಂದ್ಯದಲ್ಲಿಯೇ ದೊಡ್ಡ ಮಟ್ಟದ ಇನ್ನಿಂಗ್ಸ್ ನಿರೀಕ್ಷೆ ಮಾಡುವುದು ತಪ್ಪು, ನಾವೂ ಕೂಡ ಆರಂಭದ ದಿನಗಳಲ್ಲಿ ಈ ರೀತಿಯ ಕಷ್ಟಗಳನ್ನು ಎದುರಿಸಿ ಮೇಲೆ ಬಂದವರು. ಹೀಗಾಗಿ ಯುವ ಆಟಗಾರರಿಗೆ ಒಂದಷ್ಟು ಪಂದ್ಯಗಳ ಕಾಲಾವಕಾಶ ನೀಡಬೇಕು, ನಂತರವಷ್ಟೆ ಈ ಯುವ ಆಟಗಾರರ ಅಸಲಿಯತ್ತು ನಿಮಗೆ ತಿಳಿಯಲಿದೆ' ಎಂದು ರಾಹುಲ್ ದ್ರಾವಿಡ್ ಯುವ ಆಟಗಾರರ ಪರ ಮಾತನಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications