
ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಈ ಬಾರಿಯ ಐಪಿಎಲ್ಅನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ಗೆಲ್ಲಲು ಕಾರಣರಾಗಿದ್ದರು. ಗೆಲುವಿನ ಬಳಿಕ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆಯನ್ನು ನೀಡಿದ್ದು ಧೋನಿ ಸ್ಥಾನವನ್ನು ತುಂಬಲಿದ್ದೀರಾ ಎಂಬ ಪ್ರಸ್ನೆಗೆ ಕುತೂಹಲಕಾರಿಯಾಗಿ ಉತ್ತರಿಸಿದ್ದಾರೆ.
ಎಂಎಸ್ ಧೋನಿ ಸ್ಥಾನವನನ್ನು ತುಂಬುವುದು ಬಹಳ ಕಠಿಣ. ವಿಶ್ವಾದ್ಯಂತ ಅವರು ವಿಕೆಟ್ ಕೀಪರ್ಗಳಿಗೆ ಕೌಶಲ್ಯತೆ, ಫಿನಿಶಿಂಗ್ ಸಾಮರ್ಥ್ಯ ಹಾಗೂ ಬ್ಯಾಟಿಂಗ್ನಿಂದಾಗಿ ದೊಡ್ಡ ಮಾನದಂಡವನ್ನು ನಿಗದಿಪಡಿಸಿದ್ದಾರೆ. ಪ್ರತಿ ದೇಶವೂ ಧೋನಿಯಂತಾ ವಿಕೆಟ್ ಕೀಪರ್ ಪಡೆಯಬೇಕು ಎಂದು ಬಯಸುತ್ತದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೆ ಒಂದೆರಡು ಅವಕಾಶವನ್ನು ಪಡೆದುಕೊಂಡಿದ್ದರು. ಆದರೆ ಅಲ್ಲಿ ಸಂಜು ಗಮನಾರ್ಹ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ ಐಪಿಎಲ್ನಲ್ಲಿ ನೀಡುವ ಪ್ರದರ್ಶನದಿಂದಾಗಿ ಮತ್ತೆ ಟೀಮ್ ಇಂಡಿಯಾದಲ್ಲಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯಲು ಸಂಜುಗೆ ದಾರಿ ಮಾಡಿಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದಲ್ಲಿ ನಾವು ಹಲವು ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದೇವೆ. ಪ್ರಥಮದರ್ಜೆ ಕ್ರಿಕೆಟ್ ಅಥವಾ ರಾಷ್ಟ್ರೀಯ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ಆರೋಗ್ಯಕರ ಸ್ಪರ್ಧೆಯಿದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ
ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 32 ಎಸೆತಗಳಲ್ಲಿ 74 ರನ್ ಚಚ್ಚಿದ್ದರು. ಇದರಲ್ಲಿ 9 ಸಿಕ್ಸರ್ಗಳು ಸೇರಿತ್ತು. ಈ ಮೂಲಕ ಚೆನ್ನೈ ತಂಡ ಬೃಹತ್ ಗುರಿಯನ್ನು ಪಡೆದುಕೊಂಡಿತ್ತು. ಈ ಗುರಿಯನ್ನು ತಲುಪಲು ಸಾಧ್ಯವಾಗದ ಚೆನ್ನೈ ಸೋಲುಕಂಡಿತ್ತು.