
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ನಿವೃತ್ತಿಯನ್ನು ವಾಪಾಸ್ ಪಡೆದು ಭಾರತೀಯ ಕ್ರಿಕೆಟ್ಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ದೇಶಿಯ ಕ್ರಿಕೆಟ್ನಲ್ಲಿ ಪಂಜಾಬ್ ತಂಡದ ಪರವಾಗಿ ಆಡುವ ಮೂಲಕ ಯುವಕರಿಗೆ ಮಾರ್ಗದರ್ಶ ನೀಡಲು ಮಾಡಿಕೊಂಡ ಮನವಿಗೆ ಯುವರಾಜ್ ಸ್ಪಂದಿಸಿದ್ದು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಯುವರಾಜ್ ಸಿಂಗ್ ಅವರ ಕಮ್ಬ್ಯಾಕ್ ನಿರ್ಧಾರ ಕೇವಲ ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಮಾತ್ರ ಸಂತಸವನ್ನು ತಂದಿಲ್ಲ. ಯುವರಾಜ್ ಸಿಂಗ್ ಅವರ ಮಾಜಿ ಸಹ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ಗೂ ಈ ಸುದ್ದಿ ಖುಷಿಕೊಟ್ಟಿದೆ. ಈ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಎಎನ್ಐಗೆ ಪ್ರತಿಕ್ರಿಯಿಸಿದ ಗೌತಮ್ ಗಂಭೀರ್ "ನಿವೃತ್ತಿ ವಾಪಾಸ್ ಪಡೆಯುವುದು ಅವರ ವೈಯಕ್ತಿಕ ನಿರ್ಧಾರ ಹಾಗೂ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಅಂಗಳಕ್ಕಿಳಿದು ಆಡಿದರೆ ನಿಜಕ್ಕೂ ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ" ಎಂದು ಗಂಭೀರ್ ಹೇಳಿದ್ದಾರೆ.
"ಪಂಜಾಬ್ ಪರವಾಗಿ ಆಡುತ್ತಾರೆ ಎಂಬುದಾದರೆ ಯಾಕೆ ಆಡಬಾರದು? ಓರ್ವ ಕ್ರಿಕೆಟಿಗನಿಗೆ ನೀನು ಕ್ರಿಕೆಟ್ ಆಡಲು ಆರಂಭಿಸು ಅಥವಾ ಆಡುವುದನ್ನು ನಿಲ್ಲಿಸು ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಅವರು ನಿವೃತ್ತಿಯನ್ನು ವಾಪಾಸ್ ಪಡೆದು ಮರಳಬೇಕೆಂದು ನಿರ್ಧರಿಸಿದರೆ ಸ್ಪೋರ್ತಿಯಿಂದ ಆಡಿದರೆ ಆವರಿಗೆ ತುಂಬು ಹೃದಯದ ಸ್ವಾಗತ" ಎಂದು ಗೌತಮ್ ಗಂಭೀರ್ ಎಎನ್ಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
17 ವರ್ಷಗಳ ಕ್ರಿಕೆಟ್ ಜೀವನದ ನಂತರ ಯುವರಾಜ್ ಸಿಂಗ್ 2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯವನ್ನು ಘೋಷಿಸಿದರು. ಬಳಿಕ ಯುವರಾಜ್ ಕೆಲ ವಿದೇಶಿ ಲೀಗ್ಗಳಲ್ಲಿ ಕಣಕ್ಕಿಳಿದಿದ್ದರು. ಈ ಬಾರಿ ಸಿಪಿಎಲ್ನಲ್ಲಿ ಹಾಗೂ ಆಸ್ಟ್ರೇಲಿಯಾದ ಬಿಗ್ಬ್ಯಾಷ್ ಲೀಗ್ನಲ್ಲಿ ಆಡುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಆದರೆ ಯುವರಾಜ್ ಸಿಂಗ್ ಮತ್ತೆ ದೇಶಿಯ ಕ್ರಿಕೆಟ್ನತ್ತ ದೃಷ್ಟಿ ಹರಿಸಿದ್ದಾರೆ.