
ನವದೆಹಲಿ, ಮಾರ್ಚ್ 22: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಶುಕ್ರವಾರ (ಮಾರ್ಚ್ 22) ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿದ್ದು, ಗಂಭೀರ್ ದೆಹಲಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
'ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿತ್ವದಿಂದ ಪ್ರಭಾವಿತನಾಗಿದ್ದೇನೆ. ಈ ಮೊದಲು ನಾನು ಕ್ರಿಕೆಟ್ ರಂಗಕ್ಕೆ ಕೊಡುಗೆ ನೀಡಿದ್ದೆ. ಈಗ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡುವ ವಿಶ್ವಾಸದಲ್ಲಿದ್ದೇನೆ' ಎಂದು 37ರ ಹರೆಯದ ಗಂಭೀರ್ ಅಭಿಪ್ರಾಯಿಸಿದ್ದಾರೆ.
ಗಂಭೀರ್ ಕುರಿತು ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, 'ವೃತ್ತಿ ಜೀವನದಲ್ಲಿ ಗಂಭೀರ್ ಪ್ರತಿಭಾನ್ವಿತರಾಗಿದ್ದರು. ಅವರ ಪ್ರತಿಭೆಯನ್ನು ಬಿಜೆಪಿ ಬಳಸಿಕೊಳ್ಳಲು ಬಯಸಿದೆ. ಗಂಭೀರ್ ಪ್ರತಿಭೆಯಿಂದ ಬಿಜೆಪಿಗೆ ಲಾಭವಾಗಲಿದೆ' ಎಂದು ಹೇಳಿದರು.
ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಡೇಜಾ ಕೂಡ ಬಿಜೆಪಿ ಸೇರಿದ್ದು, ಅವರೂ ಮೋದಿಯಿಂದ ಸ್ಫೂರ್ತಿಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ರಿವಾಬ ಅವರು ಗುಜರಾತ್ನ ಜಮ್ನಗರ್ ನಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.