
ಭಾರತದ ಮಾಜಿ ಕ್ರಿಕೆಟಿಗ ಹಾಗೂ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಎಂದು ಹೆಚ್ಚಾಗಿ ಗುರುತಿಸಿಕೊಂಡಿರುವ ವಿನೋದ್ ಕಾಂಬ್ಳಿ ಅವರನ್ನು ಮುಂಬೈ ನಗರದ ಬಾಂದ್ರಾ ಪೊಲೀಸರು ಫೆಬ್ರವರಿ 27ರ ಭಾನುವಾರದಂದು ಬಂಧಿಸಿ, ನಂತರ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ.
ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ನಂತರ ತಮ್ಮ ನೇರವಾದ ಟೀಕೆಗಳು ಹಾಗೂ ಮಾತುಗಳಿಂದ ಸಾಕಷ್ಟು ವಿವಾದ ಹಾಗೂ ಚರ್ಚೆಗಳಿಗೆ ಒಳಗಾಗುತ್ತಿದ್ದ ವಿನೋದ್ ಕಾಂಬ್ಳೆ ಕ್ರಿಕೆಟ್ ಹೊರತುಪಡಿಸಿ ಬೇರೆ ವಿಷಯಗಳಿಂದಲೂ ಕೂಡ ಸಾಕಷ್ಟು ಸುದ್ದಿಗಳಿಗೆ ಈಡಾಗಿದ್ದರು. ಇತ್ತೀಚೆಗಷ್ಟೇ ತಮ್ಮ ಖಾತೆಯಿಂದ 1 ಲಕ್ಷ ರೂಪಾಯಿಗಳು ಕಳುವಾಗಿದೆ ಎಂದು ಸೈಬರ್ ಕ್ರೈಂಗೆ ದೂರು ದಾಖಲಿಸಿದ್ದ ವಿನೋದ್ ಕಾಂಬ್ಳೆ ಇದೀಗ ತಾವೇ ಪೊಲೀಸರ ಅತಿಥಿಯಾಗಿದ್ದಾರೆ.
ಬಾಂದ್ರಾ ಪೊಲೀಸರು ವಿನೋದ್ ಕಾಂಬ್ಳೆ ಅವರನ್ನು ಬಂಧಿಸಲು ಕಾರಣ ವಿನೋದ್ ಕಾಂಬ್ಳೆ ಕುಡಿದ ಅಮಲಿನಲ್ಲಿ ತಾವು ವಾಸಿಸುವ ಅಪಾರ್ಟ್ ಮೆಂಟ್ ಗೇಟ್ ಬಳಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದದ್ದು ಎನ್ನಲಾಗಿದೆ. ಹೀಗೆ ವಿನೋದ್ ಕಾಂಬ್ಳೆ ತಮ್ಮ ನಿವಾಸದ ಬಳಿಯೇ ಕಾರೊಂದಕ್ಕೆ ಡಿಕ್ಕಿ ಹೊಡೆದ ಕಾರಣದಿಂದಾಗಿ ಮತ್ತು ಘಟನೆ ನಡೆದ ನಂತರ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ಸ್ಥಳೀಯರು ದೂರು ನೀಡಿದ್ದರು. ದೂರು ಪಡೆದ ಬಾಂದ್ರಾ ಪೊಲೀಸರು ವಿನೋದ್ ಕಾಂಬ್ಳಿ ಅವರನ್ನು ವೇಗದ ಚಾಲನೆ ಮತ್ತು ಇತರರ ಜೀವಕ್ಕೆ ಕುತ್ತು ತರುವಂತಹ ಚಟುವಟಿಕೆಗಳನ್ನು ನಡೆಸಿದ ಕಾರಣದ ಅಡಿಯಲ್ಲಿ ಬಂಧಿಸಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ನಂತರ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಈ ವಿಷಯವನ್ನು ಎ ಎನ್ ಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಪ್ರಕಟಿಸಿದೆ.