ತಿರುವನಂತಪುರಂ, ಜುಲೈ 13: ಜಿಂಬಾಬ್ವೆ ಪ್ರವಾಸದಲ್ಲಿ ಶತಕ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿರುವ ಅಂಬಟಿ ರಾಯುಡು ಗಾಯಾಳುವಾಗಿದ್ದಾರೆ. ರಾಯುಡು ಬದಲಿಗೆ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಸೋಮವಾರ ಪ್ರಕಟಿಸಿದೆ.
ವಿಶ್ವದರ್ಜೆಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತಸವಾಗಿದೆ. ಟೀಂ ಇಂಡಿಯಾದಲ್ಲಿ ಆಡುವುದು ನನ್ನ ಕನಸಾಗಿತ್ತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಅಧ್ಯಕ್ಷ ಟಿಸಿ ಮ್ಯಾಥ್ಯೂ ಅವರು ನನಗೆ ವಿಷಯ ತಿಳಿಸಿದರು. ಮೊದಲಿಗೆ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. [ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಗೆದ್ದ ಇಂಡಿಯಾ]
ಜಿಂಬಾಬ್ವೆ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಅಂಬಟಿ ರಾಯುಡು ಅಜೇಯ 124 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ನಂತರ ಜುಲೈ 12 ರಂದು ನಡೆದ ಎರಡನೇ ಪಂದ್ಯದಲ್ಲಿ 41 ರನ್ ಗಳಿಸಿದ್ದರು.
ಸತತ ಎರಡು ಪಂದ್ಯ ಗೆದ್ದ ಅಜಿಂಕ್ಯ ರಹಾನೆ ನೇತೃತ್ವದ ತಂಡ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಮೂರನೇ ಏಕದಿನ ಪಂದ್ಯ ಜುಲೈ 14 ರಂದು ಹರಾರೆಯಲ್ಲಿ ನಡೆಯಲಿದೆ. ಇದಲ್ಲದೆ 2 ಟ್ವೆಂಟಿ ಪಂದ್ಯಗಳನ್ನು ಭಾರತ ಆಡಲಿದೆ.
ಎರಡನೇ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ತುತ್ತಾಗಿ ಗಾಯಗೊಂಡಿರುವ ಹೈದರಾಬಾದಿನ ಅಂಬಟಿ ರಾಯುಡು ಟೂರ್ನಿಯಿಂದ ಹೊರ ನಡೆದಿದ್ದಾರೆ. ಸುಮಾರು 2 ರಿಂದ 3 ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂದು ಬಿಸಿಸಿಐ ಹೇಳಿದೆ.
ಅಂಬಟಿ ರಾಯುಡು ಅವರ ಸ್ಥಾನದಲ್ಲಿ ಬ್ಯಾಟ್ಸ್ ಮನ್ ಕಮ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಉತ್ತಮ ಆಟ ಪ್ರದರ್ಶಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದರು.
20ವರ್ಷ ವಯಸ್ಸಿನ ಸಂಜು ಸ್ಯಾಮ್ಸನ್ ಅವರು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಕೇರಳ (21 ಪ್ರಥಮ ದರ್ಜೆ ಪಂದ್ಯ) ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಅನುಭವ ಹೊಂದಿದ್ದಾರೆ. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ತರಬೇತಿಯಲ್ಲಿ ಬೆಳೆದ ಪ್ರತಿಭೆ ಎನಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)