
ಕೋಲ್ಕತ್ತಾ, ಫೆಬ್ರವರಿ 16: ಬೌಲರ್ಗಳಿಗೆ ಮುಖವಾಡ (ಫೇಸ್ ಮಾಸ್ಕ್) ಬೇಕೆಂದು ಮೂವರು ಕ್ರಿಕೆಟಿಗರಿಂದ ಒತ್ತಾಯ ಕೇಳಿ ಬಂದಿದೆ. ಸೈಯದ್ ಮುಷ್ತಾಕ್ ಆಲಿ ಚಾಂಪಿಯನ್ಶಿಪ್ ಅಭ್ಯಾಸ ಪಂದ್ಯದಲ್ಲಿ ಬೆಂಗಾಲ್ ಆಟಗಾರ ಅಶೋಕ್ ದಿಂಡಾ ಅವರ ತಲೆಗೆ ಚೆಂಡು ತಾಗಿ ಗಾಯವಾದ ಬಳಿಕ ಈ ಒತ್ತಾಯ ಕೇಳಿ ಬಂದಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ಫೆಬ್ರವರಿ 11ರಂದು ನಡೆದ ಸೈಯದ್ ಮುಷ್ತಾಕ್ ಆಲಿ ಚಾಂಪಿಯನ್ಶಿಪ್ ಟಿ20 ಅಭ್ಯಾಸ ಪಂದ್ಯದ ವೇಳೆ ಬೌಲಿಂಗ್ ಬಳಿಕ ಕ್ಯಾಚ್ಗೆ ಯತ್ನಿಸಿದಾಗ ಚೆಂಡು ತಲೆಗೆ ತಗುಲಿ ದಿಂಡಾ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀರಾ ಗಂಭೀರ ಗಾಯವಾಗಿಲ್ಲ ಎಂದು ಡಾಕ್ಟರ್ ಆ ಬಳಿಕ ತಿಳಿಸಿದ್ದರು.
ಆದರೆ ಬೌಲಿಂಗ್ ವೇಳೆ ಇಂಥದ್ದೇ ಘಟನೆ ಮುಂದೆ ನಡೆಯುವ ಸಾಧ್ಯತೆ ಇದ್ದೇ ಇದೆ ಎಂದು ಮನಗಂಡಿರುವ ಭಾರತದ ಬೌಲರ್ ಅಶೋಕ್ ದಿಂಡಾ, ಬೌಲರ್ಗಳು ರಕ್ಷಣೆಗಾಗಿ ಮುಖವಾಡ ಧರಿಸುವ ಅಗತ್ಯವಿದೆ ಎಂದು ಟೆಲಿಗ್ರಾಫ್ ಜೊತೆ ಹೇಳಿಕೊಂಡಿದ್ದಾರೆ. ಭಾರತದ ಸ್ಟಾರ್ ಬೌಲರ್ ರವಿಚಂದ್ರನ್ ಅಶ್ವಿನ್ ಮತ್ತು ಜಯದೇವ್ ಉನಾದ್ಕತ್ ಕೂಡ ಇದಕ್ಕೆ ಧ್ವನಿ ಸೇರಿಸಿದ್ದಾರೆ.
ಕ್ರಿಕೆಟ್ನಲ್ಲಿ ಫೇಸ್ ಮಾಸ್ಕ್ನ ಅಗತ್ಯವನ್ನು ಜಯದೇವ್ ಉನಾದ್ಕತ್ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಉನಾದ್ಕತ್ ಟ್ವೀಟನ್ನು ರೀ ಟ್ವೀಟ್ ಮಾಡಿರುವ ಆರ್ ಅಶ್ವಿನ್ ಇದೇ ಕಳವಳವನ್ನು ತೋರಿಕೊಂಡಿದ್ದಾರೆ. 'ಬೌಲರ್ಗಳ ಮುಖವಾಡ'ದ ಬಗ್ಗೆ ಗಂಭೀರವಾಗಿ ಚಿಂತಿಸಲು ಇದು ಸಕಾಲ ಎಂಬರ್ಥದಲ್ಲಿ ಉನಾದ್ಕತ್, ಅಶ್ವಿನ್ ಟ್ವೀಟ್ ಇವೆ.