
ಕೇಪ್ಟೌನ್: 2018ರಲ್ಲಿ ಭಾರತಕ್ಕೆ ಆತಿಥ್ಯ ವಹಿಸಿದ್ದ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿತ್ತು. ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ 2-1ರಿಂದ ಗೆದ್ದಿತ್ತು. ಆದರೆ ಏಕದಿನ ಸರಣಿಯ ಚಿತ್ರಣ ಸಂಪೂರ್ಣ ಬದಲಾಗಿತ್ತು. ಆವತ್ತು ವಿರಾಟ್ ಕೊಹ್ಲಿ ಪಡೆ ಆತಿಥೇಯರನ್ನು ಏಕದಿನ ಸರಣಿಯಲ್ಲಿ 5-1ರಿಂದ ಸದೆಬಡಿದಿತ್ತು.
ಆವತ್ತಿನ ಪ್ರವಾಸ ಸರಣಿಯ ವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರೂ ಮಾದರಿಯಲ್ಲಿ ಫಾ ಡು ಪ್ಲೆಸಿಸ್ ನಾಯಕರಾಗಿದ್ದರು. ಆವತ್ತಿನ ಸರಣಿಯ ಬಗ್ಗೆ ಮಾತನಾಡಿರುವ ಡು ಪ್ಲೆಸಿಸ್, ಆ ದಿನ ಗಾಯದ ಸಮಸ್ಯೆ ತಂಡದ ಹಿನ್ನಡೆಗೆ ಕಾರಣವಾಗಿತ್ತು ಎಂದಿದ್ದಾರಲ್ಲದೆ, ಭಾರತ ಪಾರಮ್ಯ ಮೆರಯುವ ಪ್ರದರ್ಶನವೂ ನೀಡಿತ್ತು ಎಂದಿದ್ದಾರೆ.
'ಏಕದಿನ ಸರಣಿಯ ವೇಳೆ ನಮ್ಮ ತಂಡದಲ್ಲಿ 3 ಅಥವಾ 4 ಜನ ಪ್ರಮುಖ ಆಟಗಾರರು ಗಾಯಕ್ಕೀಡಾಗಿದ್ದರು. ನನ್ನ ಕೈಬೆರಳು ಮುಗಿದಿತ್ತು. ಕ್ವಿಂಟನ್ ಡಿ ಕಾಕ್ಗೂ ಗಾಯವಾಗಿತ್ತು. ಅಷ್ಟೇ ಅಲ್ಲ, ಹಾಶಿಮ್ ಆಮ್ಲಾ ಕೂಡ ಗಾಯಕ್ಕೀಡಾಗಿದ್ದರು. ಆವತ್ತು ನಮ್ಮ ಬ್ಯಾಟಿಂಗ್ ಲೈನಪ್ ಕುಸಿದುಹೋಗಿತ್ತು,' ಎಂದು ಸೋನಿ ಟೆನ್ನ ಪಿಟ್ಸ್ಟಾಪ್ ಶೋನಲ್ಲಿ ಮಾತನಾಡಿದ ಡು ಪ್ಲೆಸಿಸ್ ಹೇಳಿದ್ದಾರೆ.
'ನಾವು ಟೆಸ್ಟ್ನಲ್ಲಿ ಭಾರತ ತಂಡವನ್ನು 2-1ರಿಂದ ಸೋಲಿಸಿದ್ದೆವು. ಅದು ನಮ್ಮ ಪಾಲಿನ ಮತ್ತು ಮುಖ್ಯವಾಗಿ ನಾನು ಭಾಗವಹಿಸಿದ ಬೆಸ್ಟ್ ಟೆಸ್ಟ್ ಸರಣಿಯಾಗಿತ್ತು. ಆ ಸರಣಿ ಬಳಿಕ ಏಕದಿನದಲ್ಲಿ ಭಾರತ ಬಲಿಷ್ಠ ತಂಡವೆನ್ನುವಂತ ಪ್ರದರ್ಶನ ನೀಡಿತ್ತು,' ಎಂದು ಡು ಪ್ಲೆಸಿಸ್ ವಿವರಿಸಿದರು.