
ಕೊಲಂಬೊ, ಮೇ 27: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಸನತ್ ಜಯಸೂರ್ಯ ಅವರು ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು, ಈ ವಿಚಾರವಾಗಿ ಭಾರತ ತಂಡದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಆತಂಕ ವ್ಯಕ್ತಪಡಿಸಿದ್ದಾರೆ.
"ಸನತ್ ಜಯಸೂರ್ಯಾ ಕುರಿತಾಗಿ ಹಬ್ಬಿರುವ ಸುದ್ದಿ ನಿಜವೇ?? ನನ್ನ ವಾಟ್ಸ್ಆಪ್ನಲ್ಲಿ ಇಂಥದ್ದೊಂದು ಅಪ್ಡೇಟ್ ಬಂದಿದೆ. ಆದರೆ, ಟ್ವಿಟರ್ನಲ್ಲಿ ಈ ವಿಚಾರವಾಗಿ ಯಾವುದೇ ಸುದ್ದಿ ಇಲ್ಲ,'' ಎಂದು ಅಶ್ವಿನ್ ಸೋಮವಾರ ಟ್ವೀಟ್ ಮಾಡಿದ್ದರು.
2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂನರ್ನಿಯ ಲೇಟೆಸ್ಟ್ ಸುದ್ದಿಗಳು
ಇತ್ತೀಚೆಗೆ ಕೆನಡಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಸನತ್ ಜಯಸೂರ್ಯ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ವಾಟ್ಸ್ಆಪ್ನಲ್ಲಿ ಹರಿದಾಡುತ್ತಿದೆ.
ಹೋಂಡ ಸಿವಿಕ್ ಕಾರ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬ ಅಪಘಾತದಲ್ಲಿ ಸಂಭೀರವಾಗಿ ಗಾಯಗೊಂಡಿದ್ದು, ಬಳಿಕ ಆತನನ್ನು ಶ್ರೀಲಂಕಾದ ಕ್ರಿಕೆಟಿಗ ಸನತ್ ಜಯಸೂರ್ಯ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿದೆ.
ಅಷ್ಟೇ ಅಲ್ಲದೆ ಕೆನಡಾದಲ್ಲಿನ ಶ್ರೀಲಂಕಾದ ರಾಯಭಾರಿ ಕಚೇರಿ ಕೂಡ ಟೊರಾಂಟೊಗೆ ಭೇಟಿ ನೀಡಿದ ವೇಳೆ ಜಯಸೂರ್ಯ ಮೃತಪಟ್ಟಿರುವುದನ್ನು ದೃಢೀಕರಿಸಿದೆ ಎಂದು ವರದಿ ಮಾಡಲಾಗಿದೆ. ಅಂದಹಾಗೆ ಈ ಸುದ್ದಿಯನ್ನು ಖುದ್ದಾಗಿ ಜಯಸೂರ್ಯ ಅವರೇ ಅಲ್ಲಗಳಿದಿದ್ದು, ತಾವು ಇತ್ತೀಚೆಗೆ ಕೆನಡಾಗೆ ಭೇಟಿ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
"ನನ್ನ ಆರೋಗ್ಯ ಸ್ಥಿತಿ ಕುರಿತಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದ್ದು ಇದನ್ನು ನಂಬಬೇಡಿ. ನಾನು ಶ್ರೀಲಂಕಾದಲ್ಲೇ ಇದ್ದೇನೆ. ಇತ್ತೀಚೆಗೆ ಕೆನಡಾಗೆ ನಾನು ಭೇಟಿ ನೀಡಿಲ್ಲ. ಈ ರೀತಿಯ ಸುಳ್ಳು ಸುದ್ದಿಗಳನ್ನು ಶೇರ್ ಮಾಡುವುದನ್ನು ದಯವಿಟ್ಟು ತಪ್ಪಿಸಿ,'' ಎಂದು ದ್ವೀಪ ರಾಷ್ಟ್ರದ 49 ವರ್ಷದ ದಿಗ್ಗಜ ಆಟಗಾರ ಜಯಸೂರ್ಯ ಮನವಿ ಮಾಡಿಕೊಂಡಿದ್ದಾರೆ.