
ಸಿಡ್ನಿ: ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಗೊಳ್ಳುವುದಕ್ಕೂ ಮುನ್ನ ಭಾರತ ತಂಡದ ಆಯ್ಕೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಮುಖ್ಯವಾಗಿ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರನ್ನು ಕಡೆಗಣಿಸುತ್ತಿರುವುದು ವಿವಾದಕ್ಕೆ ದಾರಿ ಮಾಡಿಕೊಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಂಬಂಧಿಸಿ ತಂಡದ ಆಯ್ಕೆಯನ್ನು ಕೆಲ ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಟೆಸ್ಟ್ ಸ್ಪೆಷಾಲಿಷ್ಟ್ ವೃದ್ಧಿಮಾನ್ ಸಹಾ, ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಗಾಯಕ್ಕೀಡಾಗಿದ್ದರು. ಇವರಲ್ಲಿ ವೃದ್ಧಿಮಾನ್ ಸಹಾ ಹೊರತುಪಡಿಸಿ ಇನ್ನುಳಿದ ಇಬ್ಬರು ಸದ್ಯ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಜೊತೆಗಿಲ್ಲ. ಈ ಬಗ್ಗೆ ಚರ್ಚೆ ಶುರುವಾಗಿದೆ.
ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿದ್ದು ಚೇತರಿಸಿಕೊಳ್ಳುತ್ತಿರುವ ರೋಹಿತ್ ಮತ್ತು ಇಶಾಂತ್ ರನ್ನು ಫಿಟ್ನಲ್ಲಿಲ್ಲ ಅನ್ನೋ ಕಾರಣ ನೀಡಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗಿಡಲಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂಡಿದೆ.
ಐಪಿಎಲ್ನಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ವೃದ್ಧಿಮಾನ್ ಸಹಾ ಪ್ಲೇ ಆಫ್ ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ ಅವರು ಭಾರತ ತಂಡದ ಜೊತೆಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಗಾಯಕ್ಕೀಡಾಗಿದ್ದ ರೋಹಿತ್ ಪ್ಲೇ ಆಫ್ನಲ್ಲಿ ಆಡಿದ್ದರು. ಆದರೆ ಅವರು ಎನ್ಸಿಎಯಲ್ಲಿ ಚೇತರಿಸುತ್ತಿದ್ದರೂ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ತೋರಿಕೊಂಡಿದ್ದಾರೆ.