ಮೇ 21 ಮಂಗಳವಾರ, 2024ರ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ತಮ್ಮ ಕಟ್ಟುನಿಟ್ಟಿನ ವ್ಯಕ್ತಿತ್ವ ಮತ್ತು ಮಾತುಗಳಿಗೆ ಹೆಸರುವಾಸಿಯಾಗಿದ್ದಾರೆ. ಗೌತಮ್ ಮೈದಾನದಲ್ಲಿ ತುಂಬಾ ಗಂಭೀರವಾಗಿ ಕಾಣಿಸಿಕೊಳ್ಳುತ್ತಾರೆ.
ಅನೇಕ ಬಾರಿ ಅವರು ಮೈದಾನದಲ್ಲಿ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮೈದಾನದಲ್ಲಿ ಎಷ್ಟು ಸೀರಿಯಸ್ ಆಗಿ ಕಾಣುತ್ತಾರೋ, ಅಷ್ಟೇ ತಂಡಕ್ಕೆ ಯಶಸ್ಸನ್ನೂ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಪಂದ್ಯದ ವೇಳೆದ ಮೈದಾನದಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಯಿಂದ ಹಿಡಿದು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನಕ ಎಲ್ಲರೊಂದಿಗೆ ಗಂಭೀರ್ ಮಾಡಿರುವ ಫೈಟ್ ಇಂದಿಗೂ ಕ್ರಿಕೆಟ್ ಅಭಿಮಾನಿಗಳು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.
ಹೀಗಾಗಿ ಯಾವಾಗಲೂ ಗಭೀರವಾಗಿ ಕಾಣಿಸಿಕೊಳ್ಳುವ ಗೌತಮ್ ಏಕೆ ನಗಲ್ಲ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಋತುವಿನ ಐಪಿಎಲ್ನಲ್ಲೂ ಗೌತಮ್ ಗಂಭೀರ್ ನಗುವವರೆಗೂ ನಾನು ನನ್ನ ಕ್ರಶ್ಗೆ ಪ್ರಪೋಸ್ ಮಾಡುವುದಿಲ್ಲ ಎಂದು ಬರೆಯಲಾದ ಪೋಸ್ಟರ್ ಅನ್ನು ಹುಡುಗಿ ಅಭಿಮಾನಿಯೊಬ್ಬರು ಸ್ಟೇಡಿಯಂ ಒಳಗೆ ತಂದಿದ್ದರು.
ಬಳಿಕ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ಗೌತಮ್ ಗಂಭೀರ್,ಒಂದು ಬದಿಯಲ್ಲಿ ಹುಡುಗಿ ಪೋಸ್ಟರ್ ಹಿಡಿದಿರುವುದು ಹಾಗು ಇನ್ನೊಂದು ಬದಿಯಲ್ಲಿ ತಾವು ನಗುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಅದರ ಶೀರ್ಷಿಕೆಯಲ್ಲಿ, ಗಂಭೀರ್ 'ಈಗ ಹೋಗು' ಎಂದು ಬರೆದುಕೊಂಡಿದ್ದರು.
ಈ ಎಲ್ಲ ಘಟನೆ ನಡೆದ ಬಳಿಕ ಮತ್ತೊಮ್ಮೆ ಗೌತಮ್ ಗಂಭೀರ್ ನಗುವಿನ ಬಗ್ಗೆ ಚರ್ಚೆ ವೈರಲ್ ಆಗಿದೆ. ಟೀಮ್ ಇಂಡಿಯಾ ಲೆಂಡರಿ ಸ್ಪಿನ್ನರ್ ರವಿಚಂದ್ರನ ಆಶ್ವಿನ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಗೌತಮ್ ಗಂಭೀರ್ ನಗುವಿನ ಬಗ್ಗೆ ಚರ್ಚೆ ನಡೆದಿದೆ.
ಆರ್ ಆಶ್ವಿನ್ ಅವರು ಗೌತಮ್ ಗಂಭೀರ್ ಅವರನ್ನು ಸಂದರ್ಶನ ಮಾಡುವಾಗ ನೀವು ಏಕೆ ಮೈದಾನದಲ್ಲಿ ನಗುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಗೌತಮ್ ಗಂಭೀರ್ ಸಂದರ್ಶನದಲ್ಲಿ ಗರಂ ಆಗಿದ್ದಾರೆ.
ನಾನು ನಗುವುದಿಲ್ಲ, ಯಾವಾಗಲೂ ಸೀರಿಯಸ್ ಆಗಿ ಆಟದಲ್ಲಿ ಮುಳುಗಿರುತ್ತೇನೆ ಎಂದು ಆನೇಕರು ಹೇಳುತ್ತಾರೆ. ಆದರೆ ಜನರು ನನ್ನ ನಗು ನೋಡುವುದಕ್ಕೆ ಬರುವುದಿಲ್ಲ. ನಾನು ಗೆಲ್ಲುವುದನ್ನು ನೋಡೋಕೆ ಬರುತ್ತಾರೆ. ಯಾವಾಗಲೂ ನಗುತ್ತಾ ಇರುವುದಕ್ಕೆ ನಾನು ಬಾಲಿವುಡ್ ಹೀರೋ ಅಲ್ಲ ಎಂದು ಕೆಂಡಕಾರಿದ್ದಾರೆ.
ಈ ವರ್ಷ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಗೌತಮ್ ಗಂಭೀರ್ ಮೆಂಟರ್ ಆಗಿ ಸೇರಿಕೊಂಡಿದ್ದು, ಕೆಕೆಆರ್ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕ್ವಾಲಿಫೈಯರ್-1 ರ ಪಂದ್ಯವನ್ನು ಕೋಲ್ಕತ್ತಾ ಆಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೆಕೆಆರ್ ಟಾಪ್-4 ರೊಳಗೆ ಬರಲು ಸಾಧ್ಯವಾಗಲಿಲ್ಲ.
ಗೌತಮ್ ಗಂಭೀರ್ ಅವರು 2011ರಿಂದ 17ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ನಾಯಕರಾಗಿದ್ದರು. 2012 ಮತ್ತು 2014ರಲ್ಲಿ ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದರು. 2022 ಮತ್ತು 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ಗೆ ಮಾರ್ಗದರ್ಶಕರಾಗಿದ್ದರು.
ಈ ಎರಡೂ ಸೀಸನ್ಗಳಲ್ಲಿ ಲಕ್ನೋ ತಂಡವನ್ನು ಪ್ಲೇ ಆಫ್ಸ್ಗೆ ಕರೆತರುವಲ್ಲಿ ಗೌತಮ್ ಗಂಭೀರ್ ಯಶ ಕಂಡಿದ್ದರು. ಆದರೆ ನವೆಂಬರ್ 21, 2023ರಂದು ಗೌತಮ್ ಗಂಭೀರ್ ಕೆಕೆಆರ್ ತಂಡಕ್ಕೆ ಮರಳುವ ಘೋಷಣೆಯನ್ನು ಅಧಿಕೃತಗೊಳಿಸಲಾಗಿತ್ತು.