ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಬಂದಿದೆ. ಘಟನೆ ನಡೆದ 2 ದಿನಗಳು ಕಳೆದ್ರೂ ಸಹ ಇನ್ನು ಇದರ ಕಾವು ಹೆಚ್ಚಾಗುತ್ತಲೇ ಇದೆ. ಗುರವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೇಸು ದಾಖಲಿಸಿಕೊಂಡಿದೆ. ಅಲ್ಲದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ಸಿಬಿ, ಇವೆಂಟ್ ಮ್ಯಾನೇಜ್ಮೆಂಟ್ ಡಿಎನ್ಎ, ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈಗ ಈ ಸಾಲಿಗೆ ಮತ್ತೊಂದು ಹೆಸರು ನಮೂದನೆ ಆಗಿದೆ. ಆರ್ ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ವಿರುದ್ಧವೂ ಸಹ FIR ದಾಖಲಿಸುವಂತೆ ಕೂಗು ಕೇಳಿಬಂದಿತ್ತು. ಈ ಬಗ್ಗೆ ನೈಜ ಹೋರಾಟಗಾರರ ವೇದಿಕೆ ವಿರಾಟ್ ವಿರುದ್ಧ ದೂರ ದಾಖಲಿಸಲು ಮುಂದಾಗಿದೆ. ಆದರೆ ಆರಂಭದಲ್ಲಿ ಪೊಲೀಸರು ದೂರು ದಾಖಲಿಸಲು ಹಿಂದೆಟು ಹಾಕಿದ್ರೂ ನಂತರ, ಒತ್ತಡಕ್ಕೆ ಮಣಿದು ದೂರು ದಾಖಲಿಸಿಕೊಳ್ಳಲಾಗಿದೆ.

ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ವಿರುದ್ಧ ದಾಖಲಿಸಿಕೊಳ್ಳುವಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಹೋರಾಟಗಾರರು ಹಠ ಹಿಡಿದಿದ್ದರು. ಆದರೆ ಕಬ್ಬನ್ ಪಾರ್ಕ್ ಪೊಲೀಸರು ಆರಂಭದಲ್ಲಿ ಈ ದೂರನ್ನು ಪಡೆಯುವಲ್ಲಿ ಹಿಂದೇಟು ಹಾಕಿದರು. ಆದರೆ ಹೋರಾಟಗಾರರ ಹೋರಾಟ ಅತಿಯಾಯಿತು. ಹಲವು ಗಂಟೆಗಳು ಹೋರಾಟಕ್ಕೆ ಕೊನೆಗೂ ಯಶ ಸಿಕ್ಕಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿರಾಟ್ ವಿರುದ್ಧ ದೂರು ದಾಖಲಿಸಲಾಗಿದೆ. ಹೋರಾಟಗಾರ ಎಚ್ಎಂ ವೆಂಕಟೇಶ್ ವಿರಾಟ್ ವಿರುದ್ಧ ದೂರು ನೀಡಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಸೋಸ್ಲೆ ಅವರನ್ನು ಬೆಂಗಳೂರಿನ ಪೊಲೀಸರು ನಗರದ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಇವರು ಆರ್ಸಿಬಿ ಮಾರ್ಕೆಟಿಂಗ್ ಹೆಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ವಿರುದ್ಧವೂ ಗುರುವಾರ ಎಫ್ಐಆರ್ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ನಿಖಿಲ್ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣವನ್ನು ಬೆಳೆಸುತ್ತಿದ್ದರು. ಆಗಲೇ ಪೊಲೀಸರು ಇವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.