ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. 30 ವರ್ಷಗಳ ನಂತರ ಪಾಕಿಸ್ತಾನ ಐಸಿಸಿ ಟೂರ್ನಿಯನ್ನು ಆತಿಥ್ಯವಹಿಸಲು ಸಜ್ಜಾಗಿದೆ. ಈ ಮೆಗಾ ಟೂರ್ನಿ ಪಾಕಿಸ್ತಾನದಲ್ಲಿ ಹಬ್ಬಕ್ಕಿಂತ ಕಡಿಮೆಯಿಲ್ಲ. ಆರಂಭದಲ್ಲಿ ಈ ಟೂರ್ನಿ ಬಗ್ಗೆ ಸಾಕಷ್ಟು ಗದ್ದಲ ಉಂಟಾಯಿತು. ಅಂತಿಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ನಿರ್ಧರಿಸಿತು.
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಕೆಲವು ವಿವಾದಗಳಿಂದ ತುಂಬಿದ್ದು, 5 ಪ್ರಮುಖ ವಿವಾದಗಳ ಬಗ್ಗೆ ಇಲ್ಲಿದೆ ಮಾಹಿತಿ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇದರ ನಡುವೆ ಕರಾಚಿಯ ಸ್ಟೇಡಿಯಂನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ 8 ತಂಡಗಳ ಪೈಕಿ ಏಳು ತಂಡಗಳ ರಾಷ್ಟ್ರ ಧ್ವಜಗಳನ್ನು ಹಾರಿಸಲಾಗಿತ್ತು. ಆದರೆ ಅಲ್ಲಿ ಭಾರತದ ತ್ರಿವರ್ಣ ಧ್ವಜ ಇರಲಿಲ್ಲ. ಇದಾದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಟೀಕೆಗೆ ಗುರಿಯಾಯಿತು. ಈ ನಿರ್ಧಾರ ಐಸಿಸಿಯದ್ದು ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಆದರೆ ಸ್ಟೇಡಿಯಂನಲ್ಲಿ ಆಯೋಜಕರು ಇತರ ಎಲ್ಲಾ ತಂಡಗಳ ರಾಷ್ಟ್ರ ಧ್ವಜಗಳ ನಡುವೆ ಭಾರತದ ತ್ರಿವರ್ಣ ಧ್ವಜವನ್ನು ಹಾಕಬೇಕಾಗಿತ್ತು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಗರಂ ಹಾಕಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ ಪ್ರತಿ ತಂಡದ ಜೆರ್ಸಿಯಲ್ಲಿ ಆತಿಥೇಯ ದೇಶದ ಹೆಸರು ಇರುತ್ತದೆ. ಆದರೆ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಇಲ್ಲ ಎಂಬ ಸುದ್ದಿ ಪಾಕಿಸ್ತಾನದಿಂದ ಬಂದಿತ್ತು. ಅದರ ಬಗ್ಗೆ ಪಿಸಿಬಿ ಐಸಿಸಿಗೆ ದೂರು ನೀಡಿತು. ಇದಾದ ನಂತರ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಇರಲಿದೆ. ಐಸಿಸಿಯ ಪ್ರತಿಯೊಂದು ನಿಮಯವನ್ನು ಟೀಮ್ ಇಂಡಿಯಾ ಪಾಲಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದರು.
ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸ ಮಾಡಲು ಸಾಧ್ಯವಾಗದಿರುವುದು ಕೂಡ ವಿವಾದಕ್ಕೆ ಎಡೆ ಮಾಡಿತ್ತು. ಐಸಿಸಿ ಕೂಡ ಹಲವು ದಿನಗಳವರೆಗೆ ಈ ವಿಷಯದಲ್ಲಿ ಸಿಲುಕಿಕೊಂಡಿತ್ತು. ಭದ್ರತಾ ಕಾರಣಗಳಿಂದಾಗಿ ಬಿಸಿಸಿಐ ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸ್ಪಷ್ಟವಾಗಿ ನಿರಾಕರಿಸಿತ್ತು. ಬಳಿಕ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಿತು. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಪಾಕಿಸ್ತಾನ ತಂಡವು ಭಾರತ ಪ್ರವಾಸ ಮಾಡುವುದಿಲ್ಲ ಎಂದು ಐಸಿಸಿ ಮುಂದೆ ಪಿಸಿಬಿ ಹೇಳಿತ್ತು. ಇದಕ್ಕೆ ಒಪ್ಪಿದ ಐಸಿಸಿ ಭಾರತ ಆಯೋಜಿಸಲಿರುವ ಪಂದ್ಯಗಳು ಸಹ ಹೈಬ್ರಿಡ್ ಮಾದರಿಯಲ್ಲಿರುತ್ತವೆ ಎಂದಿದೆ.
ಐಸಿಸಿ ಇತ್ತೀಚೆಗೆ 2025ರ ಚಾಂಪಿಯನ್ಸ್ ಟ್ರೋಫಿಗೆ ಅಂಪೈರ್ಗಳು ಮತ್ತು ಮ್ಯಾಚ್ ರೆಫರಿಗಳ ಹೆಸರುಗಳನ್ನು ಪ್ರಕಟಿಸಿದೆ. ಪಟ್ಟಿಯಲ್ಲಿ ಒಬ್ಬನೇ ಒಬ್ಬ ಭಾರತೀಯನೂ ಇರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅಂಪೈರ್ ನಿತಿನ್ ಮೆನನ್ ಚಾಂಪಿಯನ್ಸ್ ಟ್ರೋಫಿಯಿಂದ ರಜೆ ತೆಗೆದುಕೊಂಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ನಿರಂತರ ಕೆಲಸದ ಹೊರೆಯಿಂದಾಗಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಈಗಾಗಲೇ ಐಸಿಸಿ ಟೂರ್ನಿಯಿಂದ ರಜೆ ತೆಗೆದುಕೊಂಡಿದ್ದಾರೆ. ಇದು ಕೂಡ ಚಾಂಪಿಯನ್ಸ್ ಟ್ರೋಫಿ ಮತ್ತೊಂದು ವಿವಾದವಾಗಿದೆ.
ಚಾಂಪಿಯನ್ಸ್ ಟ್ರೋಫಿ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ನಲ್ಲಿಯೂ ಕೋಲಾಹಲ ಉಂಟಾಗಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು 2021ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಮಹಿಳಾ ಕ್ರೀಡೆಗಳನ್ನು ನಿಷೇಧಿಸಿದೆ. ಅಲ್ಲದೆ, ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ನಡೆಯುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಪತ್ರ ಬರೆದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವು ಅಫ್ಘಾನಿಸ್ತಾನದೊಂದಿಗೆ ಪಂದ್ಯಗಳನ್ನು ಆಡಬಾರದು ಎಂದು ಮನವಿ ಮಾಡಿದ್ದರು. ಆದರೆ ಈ ಬೇಡಿಕೆಯನ್ನು ಇಸಿಬಿ ತಿರಸ್ಕರಿಸಿತ್ತು.