17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಸ್ಮರಣೀಯಗಳಿಗೆ ಸಾಕ್ಷಿಯಾಗಿದೆ. ಆದರೆ ನಾಳೆ (ಮೇ18) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯಗಳು ಕೇವಲ ಕ್ರಿಕೆಟ್ ಸ್ಪರ್ಧೆಯಲ್ಲ. ಇದು ಉಭಯ ತಂಡಗಳ ನಾಯಕರ ನಡುವಿನ ನಾಯಕತ್ವ ಮತ್ತು ತಂತ್ರದ ಯುದ್ಧವಾಗಿದೆ. ಜೊತೆಗೆ ಪ್ರತಿಷ್ಠೆಗಾಗಿ ನಡೆಯುವ ಹೈವೋಲ್ಟೇಜ್ ಪಂದ್ಯವಾಗಿ ಏರ್ಪಟಿದೆ.

ಅಭಿಮಾನಗಳಿಗೆ ಉಭಯ ತಂಡಗಳ ಪಂದ್ಯ ಯಾವಾಗಲೂ ಸಾಕಷ್ಟು ಬಾರಿ ಕುತೂಹಲ ಹೆಚ್ಚಿಸಿದೆ. ಅಲ್ಲದೆ, ಅಭಿಮಾನಿಗಳಿಗೆ ಅತ್ಯುತ್ತಮ ಟಿ20 ಕ್ರಿಕೆಟ್ ನೋಡುವ ಭಾಗ್ಯ ಸಿಕ್ಕಿದೆ. ಆರ್ಸಿಬಿ ಮತ್ತ ಸಿಎಸ್ಕೆ ಎರಡು ತಂಡಗಳ ಆಟಗಾರರು ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಆನೇಕ ದಾಖಲೆಗಳನ್ನು ಬರೆದಿದ್ದಾರೆ.
ಇದೀಗ ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಸಿಎಸ್ಕೆ ಎದುರು ಆರ್ಸಿಬಿ ಗೆಲುವು ಸಾಧಿಸಲು ರಣತಂತ್ರ ಹೆಣೆದಿದ್ದು, ಪ್ಲೇ ಆಫ್ ತಲುಪುವ ದೊಡ್ಡ ಆಸೆ ಇಟ್ಟುಕೊಂಡಿದೆ. ಈಗಾಗಲೇ ಐಪಿಎಲ್ 2024ರ ಪ್ಲೇ ಆಫ್ಗೆ ರಾಜಸ್ಥಾನ ರಾಯಲ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅರ್ಹತೆ ಪಡೆದಿವೆ.
ಹೀಗಾಗಿ ಕೊನೆಯ ಒಂದು ಸ್ಥಾನಕ್ಕಾಗಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಪ್ರಬಲ ಪೈಪೋಡಿ ನಡೆಯಲಿದೆ. ಆರ್ಸಿಬಿ ಶತಯಗತಾಯ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಪ್ರದರ್ಶನ ನೀಡಿ 2 ಅಂಕಗಳನ್ನು ಪಡೆದು ಉತ್ತಮ ರನ್ ರೇಟ್ನೊಂದಿಗೆ ಪ್ಲೇ ಆಫ್ಗೆ ಪ್ರವೇಶಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಈಗಾಗಲೇ ಆರ್ಸಿಬಿ ಆಡಿರುವ 13 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ್ದು, 12 ಅಂಕಗಳನ್ನು ಕಲೆ ಹಾಕಿ 7ನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಆಡಿದ 13 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಕಂಡಿದ್ದು, 14 ಅಂಕಗಳನ್ನು ಕಲೆ ಹಾಕಿ 4ನೇ ಸ್ಥಾನದಲ್ಲಿದೆ. ಶನಿವಾರ ನಡೆಯುವ ಪಂದ್ಯವನ್ನು ಗೆದ್ದು ಸಿಎಸ್ಕೆ ಸಹ ಮುಂದಿನ ಹಂತ ಪ್ರವೇಶಿಸುವ ಕನಸು ಕಾಣುತ್ತಿದೆ.
ಪ್ಲೇ ಆಫ್ ತಲುಪಲು ಆರ್ಸಿಬಿ, ಚೆನ್ನೈ ವಿರುದ್ಧ ಗೆಲ್ಲಲೇಬೇಕು. ಅಷ್ಟೇ ಅಲ್ಲ, ಪ್ಲೇ ಆಫ್ಗೆ ಲಗ್ಗೆ ಇಡಲು ಆರ್ಸಿಬಿ ಉತ್ತಮ ರನ್ ರೇಟ್ನೊಂದಿಗೆ ಪಂದ್ಯವನ್ನು ಗೆಲ್ಲಬೇಕಾದ ಅನಿರ್ವಾಯದಲ್ಲಿದೆ.
ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿ 200ಕ್ಕೂ ಹೆಚ್ಚು ರನ್ಗಳ ಟಾರ್ಗೆಟ್ ಅನ್ನು ಸಿಎಸ್ಕೆ ತಂಡಕ್ಕೆ ನೀಡಬೇಕು. ಬಳಿಕ ಸಿಎಸ್ಕೆ ವಿರುದ್ಧ 18 ರನ್ ಅಂತರದಿಂದ ಗೆಲ್ಲಬೇಕು. ಇದು ಸಾಧ್ಯವಾಗದೆ ಇದ್ದಲ್ಲಿ ಚೆನ್ನೈ ನೀಡುವ ಗುರಿಯನ್ನು ಕೇವಲ 18.1 ಓವರ್ಗಳಲ್ಲಿ ಮುಟ್ಟಬೇಕು. ಆಗ 14 ಅಂಕಗಳೊಂದಿಗೆ ಚೆನ್ನೈಗಿಂತ ಮೇಲಕ್ಕೆ ತಲುಪಿ ಪ್ಲೇ ಆಫ್ಗೆ ಅರ್ಹತೆ ಪಡೆಯಲಿದೆ.
ಮುಂದಿನ ಒಂದು ವಾರದ ವರೆಗೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮೇ 18 ರಂದು ಪಂದ್ಯ ನಡೆಯುವ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಮಳೆ ಬಂದು ನಿಂತರೆ, ಮೈದಾನದಲ್ಲಿ ಇರುತ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನೀರನ್ನು ಹೊರ ಹಾಕಬಹುದು.
ಪಂದ್ಯದ ನಿಗದಿತ ಸಮಯದ ವರೆಗೆ ಮಳೆ ನಿಲ್ಲದೆ ಹೋದಲ್ಲಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆಗ ಚೆನ್ನೈ ಸೂಪರ್ ಕಿಂಗ್ಸ್ ನೇರವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಆರ್ಸಿಬಿ ಮುಂದಿನ ಹಂತ ತಲಪುವ ಆಸೆ ಮಣ್ಣು ಪಾಲಾಗುತ್ತದೆ.
ರಾತ್ರಿ ಹೊತ್ತು ಪಂದ್ಯ ನಡೆಯುವುದರಿಂದ ಸಾಮಾನ್ಯವಾಗಿ ಮಳೆ ಬರುವ ಭೀತಿ ಹೆಚ್ಚಿದೆ. ಹೀಗಾಗಿ ಅಭಿಮಾನಿಗಳು ತಲಾ 5 ಓವರ್ ಪಂದ್ಯದ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರ್ಸಿಬಿ ಗೆಲ್ಲುವುದು ಕಷ್ಟು ಎನ್ನಲಾಗಿದೆ.
ಏಕೆಂದರೆ ಈ ಸನ್ನಿವೇಶದಲ್ಲಿ ಆರ್ಸಿಬಿ ಮೊದಲು ಬ್ಯಾಟ್ ಮಾಡಿದರೆ, 100 ರನ್ಗಳ ಆಸುಪಾಸಿನಲ್ಲಿ ಟಾರ್ಗೆಟ್ ನೀಡಿ, 60 ರನ್ಗಳಿಂದ ಗೆಲುವು ಸಾಧಿಸಬೇಕು. ಅಲ್ಲದೆ ಚೆನ್ನೈ ನೀಡುವ ಗುರಿಯನ್ನು ಬೆನ್ನಟ್ಟಿದ ಪಕ್ಷದಲ್ಲಿ ಆರ್ಸಿಬಿ 2 ಓವರ್ಗಳ ಅಂತರದಲ್ಲಿ ಆ ಮೊತ್ತವನ್ನು ಮುಟ್ಟಬೇಕು.
ಕ್ರಿಕೆಟ್ ನಿಯಮಗಳ ಪ್ರಕಾರ, 20 ಓವರ್ಗಳ ಲೆಕ್ಕಾಚಾರವನ್ನು ಐದು ಓವರ್ಗಳಿಗೆ ಇಳಿಸಿದಾಗ ರನ್ಗಳ ಟಾರ್ಗೆಟ್ ಹಿಗ್ಗುತ್ತದೆ. ಓವರ್ಗಳ ಟಾರ್ಗೆಟ್ ಕಡಿಮೆ ಆಗುತ್ತದೆ.