ಜುಲೈ 19 ಶುಕ್ರವಾರ, ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ನಿವೃತ್ತಿಯ ನಂತರ, ಟಿ20 ತಂಡದಲ್ಲಿ ಪ್ರಮುಖ ಬದಲಾವಣೆಗಳ ಅಗತ್ಯವಿತ್ತು.
ಆದ್ದರಿಂದ ಕೆಲವು ಸ್ಟಾರ್ ಆಟಗಾರರ ಹೆಸರುಗಳನ್ನು ಕೈಬಿಡಲಾಗಿದೆ. ಭಾರತ ತಂಡವು ಜುಲೈ 27 ರಿಂದ ಜುಲೈ 30 ರವರೆಗೆ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ಬಳಿಕ ಏಕದಿನ ಸರಣಿ ಆಯೋಜಿಸಲಾಗಿದೆ.

ಅರ್ಹತೆ ಇದ್ದರೂ ಶ್ರೀಲಂಕಾ ಪ್ರವಾಸದ ಭಾರತ ಟಿ20 ಮತ್ತು ಏಕದಿನ ತಂಡದಿಂದ ಕೆಲವು ಆಟಗಾರರಿಗೆ ಸ್ಥಾನ ಸಿಕ್ಕಿಲ್ಲ. ಆ ಪ್ರಮುಖ 5 ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಆಗಿರುವ ಋತುರಾಜ್ ಗಾಯಕ್ವಾಡ್ ಅವರನ್ನು ನಿರಂತರವಾಗಿ ಭಾರತ ತಂಡದಲ್ಲಿ ಕಡೆಗಣಿಸಲಾಗುತ್ತಿದೆ. ಈ ಪುಣೆ ಬ್ಯಾಟರ್ ಟಿ20 ಮಾದರಿಯಲ್ಲಿ ಅತ್ಯಂತ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ.
ಗಾಯಕ್ವಾಡ್ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ 39.56 ಸರಾಸರಿ ಮತ್ತು 143.53 ಸ್ಟ್ರೈಕ್ ರೇಟ್ನೊಂದಿಗೆ ಒಟ್ಟು 633 ರನ್ ಗಳಿಸಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಆದರೆ ಶ್ರೀಲಂಕಾ ಪ್ರವಾಸಕ್ಕೆ ಗಾಯಕ್ವಾಡ್ ಅವರನ್ನು ನಿರ್ಲಕ್ಷಿಸಲಾಗಿದೆ.
ಇತ್ತೀಚೆಗಿನ ಜಿಂಬಾಬ್ವೆ ಪ್ರವಾಸದಲ್ಲಿ ಬಲಗೈ ವೇಗದ ಬೌಲರ್ ಮುಖೇಶ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದರು. ಹರಾರೆಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅವರು ಒಟ್ಟು 8 ವಿಕೆಟ್ಗಳನ್ನು ಪಡೆದು ಮಿಂಚಿದ್ದರು.
ಇದರ ಹೊರತಾಗಿಯೂ ಮುಖೇಶ್ ಶ್ರೀಲಂಕಾ ಸರಣಿಯ ತಂಡಕ್ಕೆ ಆಯ್ಕೆಯಾಗಿಲ್ಲ. ಖಲೀಲ್ ಅಹ್ಮದ್ ಅವರಂತಹ ಆಟಗಾರರು ಮರಳಿದ ಕಾರಣ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಐಪಿಎಲ್ ಋತುವಿನಲ್ಲಿ ಎಸ್ಆರ್ಹೆಚ್ ತಂಡದ ಪರ ಅದ್ಭುತ ಪ್ರದರ್ಶನದ ನಂತರ, ಅಭಿಷೇಕ್ ಶರ್ಮಾ ಅಂತಿಮವಾಗಿ ಭಾರತದ ಪರ ಪಾರ್ದಪಣೆ ಪಂದ್ಯವಾಡಿದರು. ಹರಾರೆಯಲ್ಲಿ ಅಭಿಷೇಕ್ ಉತ್ತಮ ಪ್ರದರ್ಶನ ನೀಡಿದರು.
ಚೊಚ್ಚಲ ಪಂದ್ಯದಲ್ಲೇ ನಾಲ್ಕು ಎಸೆತಗಳಲ್ಲಿ ಶೂನ್ಯಕ್ಕೆ ಔಟಾದರೂ, ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಎರಡನೇ ಪಂದ್ಯದಲ್ಲಿ ಅಭಿಷೇಕ್ ಕೇವಲ 48 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿದರು.
ಆ ಬಳಿಕ ಯಶಸ್ವಿ ಜೈಸ್ವಾಲ್ ತಂಡಕ್ಕೆ ಮರಳಿದ ಕಾರಣ 3ನೇ ಕ್ರಮಾಂಕದಲ್ಲಿ ಆಡಬೇಕಾಯಿತು. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಅಭಿಷೇಕ್ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿಭೆ ಇದ್ದರೂ ಅಭಿಷೇಕ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಸುಮಾರು ವರ್ಷಗಳಿಂದ ವಿಕೆಟ್ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಭಾರತ ತಂಡದ ಒಳಗೆ ಮತ್ತು ಹೊರಗೆ ಬರುತ್ತಲೇ ಇರುವ ಆಟಗಾರರಾಗಿದ್ದಾರೆ. ಕೆಲವೊಮ್ಮೆ ಸಂಜು ಅವರನ್ನು ತಂಡದಿಂದ ಕೈ ಬಿಡುವುದು ಮತ್ತು ಉಳಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸ್ಯಾಮ್ಸನ್ ಆಯ್ಕೆಯಾಗಿದ್ದರೂ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ ಶತಕ ಸಿಡಿಸಿದ್ದರು. ಇದಾದ ನಂತರ ಸಂಜು ಯಾವುದೇ ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿಲಿಲ್ಲ.
ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯುಜ್ವೇಂದ್ರ ಚಹಾಲ್ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಟಿ20 ವಿಶ್ವಕಪ್ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಈ ಚಾಂಪಿಯನ್ ಸ್ಪಿನ್ನರ್ ಆಯ್ಕೆಯಾಗಿಲ್ಲ. ಟೀಮ್ ಇಂಡಿಯಾ ಪರ ಚಹಲ್ 80 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ.