2024ರ ಟಿ20 ವಿಶ್ವಕಪ್ ಟೂರ್ನಿಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲಗಳು ಹೆಚ್ಚಿವೆ. ಈ ಮೆಗಾ ಟೂರ್ನಿಗೆ ಆತಿಥ್ಯ ವಹಿಸಿರುವ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ನೆಲದಲ್ಲಿ ಜೂನ್ 1 ರಿಂದ 29ರ ವರೆಗೂ ಕ್ರಿಕೆಟ್ ಹಬ್ಬ ನಡೆಯಲಿದೆ.
ಈ ಚುಟುಕು ಕ್ರಿಕೆಟ್ ಮಹಾ ಸಮರಕ್ಕೆ ಆಟಗಾಗರರು ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಒಂದು ವಾರದೊಳಗಾಗಿ ತಮ್ಮ ತಮ್ಮ ತಂಡ ಸೇರಿಕೊಳ್ಳುವ ಮೂಲಕ ಸಜ್ಜಾಗಬೇಕಿದೆ. ಇದರ ಮಧ್ಯೆ ಮೇ 1ರೊಳಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ 20 ದೇಶಗಳ ತಂಡಗಳಲ್ಲಿ ಆಡುವ 15 ಜನ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೂಚನೆ ನೀಡಿದೆ.
ಇದರ ಬೆನ್ನೆಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವೆಲ್ಲಾ ಆಟಗಾರರಿಗೆ ಮಣೆ ಹಾಕುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಟೀಮ್ ಇಂಡಿಯಾದಲ್ಲಿ 15 ಆಟಗಾರರ ಸ್ಥಾನಕ್ಕೆ ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಸ್ಫರ್ಧೆ ಶುರುವಾಗಿದ್ದು, ಅಂತಿಮ ಘಟ್ಟ ತಲುಪಿದೆ. ಯುವ ಆಟಗಾರರು ಹಾಗು ಅನುಭವಿ ಆಟಗಾರರು ತಮ್ಮ ಅದ್ಭುತ ಪ್ರದರ್ಶನದಿಂದ ಬಿಸಿಸಿಐ ಗಮನ ಸೆಳೆದಿದ್ದಾರೆ.
ಆದರೆ ಟೀಮ್ ಇಂಡಿಯಾದ ಕೆಲ ಸ್ಟಾರ್ ಆಟಗಾರರು ಎದುರಿಸುತ್ತಿರುವ ಫಾರ್ಮ್ ಸಮಸ್ಯೆ ಹಾಗು ಇವರಿಗಿಂತ ಮುಂಚೂಣಿಯಲ್ಲಿರುವ ಆಟಗಾರರ ಪ್ರದರ್ಶನದಿಂದ ಅವಕಾಶ ಸಿಗದೆ ಟಿ20 ವಿಶ್ವಕಪ್ ಟೂರ್ನಿ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.

ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ನಂತರ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ಪರ ಆನೇಕ ಪ್ರತಿಷ್ಠಿತ ಟೂರ್ನಿಗಳಲ್ಲಿ ಕಣಕ್ಕೀಳಿದು ವಿಕೆಟ್ಗಳನ್ನು ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಗೆಲುವಿನ ರೂವಾರಿ ಆಗಿದ್ದಾರೆ. ಆದರೆ ಐಪಿಎಲ್ 2024ರಲ್ಲಿ ಮಾತ್ರ ಆರ್ಸಿಬಿ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಸಿರಾಜ್ ಕಳಪೆ ಫಾರ್ಮ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇಲ್ಲಿವರೆಗೆ ಆಡಿರುವ 9 ಪಂದ್ಯಗಳಿಂದ ಸಿರಾಜ್ ಕೇವಲ 6 ವಿಕೆಟ್ಗಳನ್ನು ಪಡೆದಿದ್ದಾರೆ. ಹೀಗಾಗಿ ಸಿರಾಜ್ ಅವರಿಗೆ ಬಿಸಿಸಿಐ ಕೊಕ್ ನೀಡುವ ಸಾಧ್ಯತೆ ಇದೆ.

ಟೀಮ್ ಇಂಡಿಯಯಾ ಪರ ವೈಟ್ ಬಾಲ್ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯ ತೋರಿರುವ ಇಶಾನ್ ಕಿಶನ್ 2024ರ ಟಿ20 ವಿಶ್ವಕಪ್ ಆಡುವ ಬಯಕೆ ಇಟ್ಟುಕೊಂಡಿದ್ದರು. ಆದರೆ ಈ ಬಾರಿ ವಿಕೆಟ್ ಕೀಪರ್ ಅಂಡ್ ಬ್ಯಾಟರ್ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿರುವುದರಿಂದ ಇಶಾನ್ ಕಿಶನ್ ಈ ವರ್ಷ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನವಾಗಿದೆ. ಅಲ್ಲದೆ ಈ ಋತುವಿನ ಐಪಿಎಲ್ನಲ್ಲಿ ಇಶಾನ್ ಬ್ಯಾಟ್ ನಿಂದ ರನ್ ಬಂದಿಲ್ಲ.

ಆರ್ಸಿಬಿ ಪರ ವಿಕೆಟ್ ಕೀಪರ್ ಮತ್ತು ಫಿನಿಶರ್ ಪಾತ್ರ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಅವರು ಪ್ರಸ್ತುತ ಐಪಿಎಲ್ನಲ್ಲಿ ತಮ್ಮ ಅಮೋಘ ಪ್ರದರ್ಶನ ನೀಡಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಅವರಿಗಿಂತ ಮುಂಚೂಣಿಯಲ್ಲಿ ಯುವ ಆಲ್ ರೌಂಡರ್ ಶಿವಂ ದುಬೆ ಹೆಸರು ಫಿನಿಶರ್ ಸ್ಥಾನಕ್ಕೆ ಕೇಳಿ ಬರುತ್ತಿದೆ. ಹೀಗಾಗಿ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಿದೆ.

2020ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ರವಿ ಬಿಷ್ಣೋಯಿ ಭರ್ಜರಿ ಪ್ರದರ್ಶನ ನೀಡಿದ್ದರು. ಇದರ ಪ್ರತಿಫಲವೇ ಐಪಿಎಲ್ಗೂ ಆಯ್ಕೆಯಾಗಿ ಸ್ಥಿರ ಪ್ರದರ್ಶನ ನೀಡಿದರಿಂದ ಭಾರತ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಋತುವಿನ ಐಪಿಎಲ್ನಲ್ಲಿ ಬಿಷ್ಣೋಯಿ ಮಂಕಾಗಿದ್ದು, ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಅಚ್ಚರಿ ಉಂಟು ಮಾಡಿಲ್ಲ. ಹೀಗಾಗಿ ಕೇವಲ 5 ವಿಕೆಟ್ ಪಡೆದುಕೊಂಡಿದ್ದಾರೆ. ಇತ್ತ ಮತ್ತೊರ್ವ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಬಿಷ್ಣೋಯ್ ಆಯ್ಕೆ ಡೌಟ್ ಆಗಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ರಿಂಕು ಸಿಂಗ್ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದರು. ಬಳಿಕ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರ. ಆದರೆ ಈ ಬಾರಿಯ ಐಪಿಎಲ್ನಲ್ಲಿ ರಿಂಕು ಅಬ್ಬರ ಕಂಡು ಬಂದಿಲ್ಲ. ಅಲ್ಲದೇ ಈಗಾಗಲೇ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಇಬ್ಬರೂ ಬೆಸ್ಟ್ ಫಿನಿಶರ್ ಮತ್ತು ಬೌಲಿಂಗ್ ಆಲೌ ರೌಂಡರ್ ಆಗಿರುವುದರಿಂದ ಇವರಿಬ್ಬರ ನಡುವೆ ರಿಂಕು ಸಿಂಗ್ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗುವುದು ಕಷ್ಟಕರ ಸಂಗತಿ.