ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದೆ. ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯೂ ಟೀಮ್ ಇಂಡಿಯಾವನ್ನು ಶನಿವಾರ ಪ್ರಕಟಿಸಿದೆ. ಚಾಂಪಯನ್ಸ್ ಟ್ರೋಫಿ ಭಾರತ ತಂಡದಿಂದ ಐವರು ಸ್ಟಾರ್ ಆಟಗಾರರನ್ನು ಕೈ ಬಿಡಲಾಗಿದೆ. ಇದರೊಂದಿಗೆ ಈ 5 ಆಟಗಾರರಿಗೆ ಚಾಂಪಿಯನ್ಸ್ ಟ್ರೋಫಿ ಆಡುವ ಕನಸು ಭಗ್ನಗೊಂಡಿದೆ.
ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ಭಾರತ ತಂಡ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ. ಇದಾದ ನಂತರ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಬಳಿಕ ಮೂರನೇ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ಟೂರ್ನಿಗೆ ಆಯ್ಕೆಯಾಗದ 5 ದುರದೃಷ್ಟಕರ ಕ್ರಿಕೆಟಿಗರ ಹೆಸರು ಇಲ್ಲಿದೆ.

ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಿಂದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗಿದೆ. ಸಿರಾಜ್ ಅವರನ್ನು ತಂಡದಿಂದ ಕ ಬಿಟ್ಟಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರ ಕಳಪೆ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಆಯ್ಕೆ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಿರಾಜ್ ಕೆಲ ದಿನಗಳಿಂದ ತಮ್ಮ ಲಯದಲ್ಲಿ ಕಾಣಿಸಿಕೊಂಡಿಲ್ಲ.ಅವರ ಬದಲಿಗೆ ಅರ್ಷದೀಪ್ ಸಿಂಗ್ ಮೇಲೆ ಟೀಮ್ ಮ್ಯಾನೇಜ್ಮೆಂಟ್ ವಿಶ್ವಾಸ ತೋರಿದೆ.
2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದ ಸ್ಟಾರ್ ಆಲ್ ರೌಂಡರ್ ಶಿವಂ ದುಬೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆಯ್ಕೆದಾರರು ಹಾರ್ದಿಕ್ ಪಾಂಡ್ಯ ರೂಪದಲ್ಲಿ ಅತ್ಯುತ್ತಮ ಆಲ್ರೌಂಡರ್ ಅನ್ನು ತಂಡದಲ್ಲಿ ಸೇರಿಸಿದ್ದಾರೆ. ಈ ಕಾರಣದಿಂದಾಗಿ ಶಿವಂ ದುಬೆ ಅವರನ್ನು ಹೊರಗಿಡಲಾಗಿದೆ. ಟಿ20 ವಿಶ್ವಕಪ್ನಲ್ಲಿ ಆಡಿದ ನಂತರ ದುಬೆ ದೇಶೀಯ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ, ಬಿಸಿಸಿಐ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿಲ್ಲ.
ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಮತ್ತೆ ಕಡೆಗಣಿಸಿದ್ದಾರೆ. ಚಹಾಲ್ ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ, ಯಾವುದೇ ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಚಾಂಪಿಯನ್ಸ್ ಟ್ರೋಫಿ ಮಾತ್ರವಲ್ಲ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮತ್ತು ಏಕದಿನ ಸರಣಿಯ ತಂಡದಲ್ಲಿ ಚಹಾಲ್ ಸ್ಥಾನ ಪಡೆದಿಲ್ಲ.
ಭಾರತ ತಂಡವನ್ನು ಪ್ರಕಟಿಸುವ ಮೊದಲು, ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಆದರೆ ಆಯ್ಕೆಗಾರರು ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗಿಟ್ಟಿದ್ದಾರೆ. ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ವರದಿಗಳ ಪ್ರಕಾರಗಳ, ಸಂಜು ಸ್ಯಾಮ್ಸನ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.
ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಇನ್ನೂ ಟೀಮ್ ಇಂಡಿಯಾಗೆ ಮರಳಿಲ್ಲ. 2023ರ ವಿಶ್ವಕಪ್ನಲ್ಲಿ ಆಡಿದ ಇಶಾನ್ ಕಿಶನ್ ಕೇಂದ್ರ ಒಪ್ಪಂದವನ್ನು ಕಳೆದುಕೊಂಡ ನಂತರ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಇಶಾನ್ ಕಿಶನ್ ಏಕದಿನ ಮಾದರಿಯಲ್ಲಿ ಅತಿ ವೇಗದ ದ್ವಿಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.