ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ಸೋಲನುಭವಿಸಿದ ನಂತರ ಬಿಸಿಸಿಐ ಸಂಪೂರ್ಣ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಆಯ್ಕೆ ಸಮಿತಿಗೆ ಹೊಸಬರನ್ನು ನೇಮಕ ಮಾಡಲು ಮುಂದಾಗಿದ್ದು ಭಾರತದ ಮಾಜಿ ಆಲ್ರೌಂಡರ್ ಅಜಿತ್ ಅಗರ್ಕರ್ ಆಯ್ಕೆದಾರರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಕಳೆದ ಬಾರಿ ಕೂಡ ಅಜಿತ್ ಅಗರ್ಕರ್ ಅರ್ಜಿ ಸಲ್ಲಿಸಿದ್ದರು. ಆದರೆ, ಹುದ್ದೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೆ, ಈಗ ಮತ್ತೆ ಅರ್ಜಿ ಸಲ್ಲಿಸಲು ಸಿದ್ಧವಾಗಿದ್ದಾರೆ, ಬಿಸಿಸಿಐ ಕೂಡ ಆಸಕ್ತಿ ಹೊಂದಿದೆ ಎನ್ನಲಾಗಿದೆ.
ಅಜಿತ್ ಅಗರ್ಕರ್ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಕೋಚ್ ಕೆಲಸವನ್ನು ಬಿಡಬೇಕಾಗುತ್ತದೆ.
ವಿಜಯ್ ಹಜಾರೆ ಟ್ರೋಫಿ 2022: ಅಸ್ಸಾಂ ವಿರುದ್ಧ ಸೋತ ಕರ್ನಾಟಕ, ಟೂರ್ನಮೆಂಟ್ನಲ್ಲಿ ಮೊದಲ ಸೋಲು!
"ನಾವು ಅಜಿತ್ ಅಗರ್ಕರ್ ಜೊತೆ ಈ ಬಗ್ಗೆ ಮಾತನಾಡಿಲ್ಲ. ಅವರು ಡೆಲ್ಲಿ ಸಹಾಯಕ ಕೋಚ್ ಹುದ್ದೆ ತೊರೆದು ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಾರೆಯೇ ಎನ್ನುವುದು ಅವರ ಆಯ್ಕೆಯಾಗಿದೆ. ಕೊನೆಯ ಬಾರಿಯೇ ಅವರು ಆಯ್ಕೆಯಾಗಬೇಕಿತ್ತು, ಅವರನ್ನು ಆಯ್ಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲು ಸಂತೋಷಪಡುತ್ತೇವೆ. ಐಪಿಎಲ್ ಹೊರತಾಗಿ ಅವರು ಮೂರು ಮಾದರಿಯಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಅವರ ಅನುಭವ ಅಮೂಲ್ಯವಾದದ್ದಾಗಿದೆ. ಯುವ ಆಟಗಾರರ ಜೊತೆ ಕೆಲಸ ಮಾಡುತ್ತಿದ್ದಾರೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ನವೆಂಬರ್ 28ಕ್ಕೆ ಕೊನೆ ದಿನ
ಅಜಿತ್ ಅಗರ್ಕರ್ 26 ಟೆಸ್ಟ್, 191 ಏಕದಿನ ಪಂದ್ಯಗಳು, 4 ಅಂತಾರಾಷ್ಟ್ರೀಯ ಟಿ20, 110 ಪ್ರಥಮ ದರ್ಜೆ, 270 ಎ ದರ್ಜೆಯ ಪಂದ್ಯಗಳು, 60 ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಐವರು ಸದಸ್ಯರ ಆಯ್ಕೆ ಸಮಿತಿಗೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನಾಂಕವಾಗಿದೆ. ಬಿಸಿಸಿಐ ಮೊದಲು ಹೊಸ ಕ್ರಿಕೆಟ್ ಸಲಹಾ ಸಮಿತಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ.
ಬಿಸಿಸಿಐ ಈಗಾಗಲೇ ಕೆಲವು ಮಾಜಿ ಕ್ರಿಕೆಟಿಗರ ಜೊತೆ ಮಾತುಕತೆ ನಡೆಸುತ್ತಿದೆ. ಸಿಎಸಿ ನೇಮಕಾತಿ ಕುರಿತು ಮುಂದಿನ ವಾರದೊಳಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
2021ರ ಟಿ20 ವಿಶ್ವಕಪ್ ನಂತರ ಅಬ್ಬೆ ಕುರುವಿಲ್ಲಾ ಅಧಿಕಾರವಾಧಿ ಕೊನೆಗೊಂಡ ನಂತರ, ಆ ಹುದ್ದೆ ಖಾಲಿಯಾಗಿತ್ತು. ಅಗರ್ಕರ್ ಈ ಮೊದಲು ಮುಂಬೈ ತಂಡಕ್ಕೆ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ರಾಷ್ಟ್ರೀಯ ಆಯ್ಕೆದಾರರ ಸಮಿತಿಯಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಕನಿಷ್ಠ 7 ಟೆಸ್ಟ್, 30 ಪ್ರಥಮದರ್ಜೆ ಪಂದ್ಯಗಳು, 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. 5 ವರ್ಷಗಳ ಹಿಂದೆ ಕ್ರಿಕೆಟ್ನಿಂದ ನಿವೃತ್ತರಾಗಿರಬೇಕಾಗುತ್ತದೆ.