
ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ವೈಫಲ್ಯತೆ ಕಾಣುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಭಾರತ ತಂಡ ಆಕ್ರಮಣಕಾರಿಯಾಗಿ ಆಡಿದರೆ ಮಾತ್ರವೇ ಐಸಿಸಿ ಟೂರ್ನಿಯಂಥಾ ಮಹತ್ವದ ವೇದಿಕೆಯಲ್ಲಿ ಯಶಸ್ಸು ಸಾಧ್ಯ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಮಾಜಿ ನಾಯಕ ಸೌರವ್ ಗಂಗೂಲಿ.
ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಸೌರವ್ ಗಂಗೂಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಐಸಿಸಿ ಟೂರ್ನಿಯಲ್ಲಿ ಅದರಲ್ಲೂ ವಿಶೇಷವಾಗಿ ಟಿ20 ಮಾದರಿಯಲ್ಲಿ ಯಶಸ್ಸು ಸಾಧಿಸಬೇಕಾದರೆ ಆಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸುವುದು ಅನಿವಾರ್ಯ ಎಂದಿದ್ದಾರೆ ಸೌರವ್ ಗಂಗೂಲಿ.
"ಭಾರತ ತಂಡ ಆಕ್ರಮಣಕಾರಿಯಾಗಿ ಆಡಬೇಕಿದೆ. ವಿಶೇಷವಾಗಿ ಟಿ20ಮಾದರಿಯಲ್ಲಿ. ಅದಕ್ಕೆ ಪೂರಕವಾಗಿ ತಂಡ ನಮ್ಮಲ್ಲಿ ಇದೆ" ಎಂದಿದ್ದಾರೆ ಸೌರವ್ ಗಂಗೂಲಿ. "ಭಾರತ ತಂಡ ಯಾವಾಗಲೂ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಹೊಂದಿದೆ. ಮುಂದಿನ ಹಂತಕ್ಕೇರುವ ಹಸಿವಿರುವ ಬಲಿಷ್ಠ ಆಟಗಾರರಿದ್ದಾರೆ. ದೊಡ್ಡ ಮಟ್ಟದ ಟೂರ್ನಿಗಳೀಗೆ ಹೇಗೆ ಸಿದ್ಧತೆ ನಡೆಸಲಾಗುತ್ತದೆ ಎಂಬುದಷ್ಟೇ ಮುಖ್ಯವಾಗುತ್ತದೆ" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ಈ ವರ್ಷ ಏಕದಿನ ವಿಶ್ವಕಪ್ನ ವರ್ಷವಾಗಿರುವ ಕಾರಣ ಅನುಭವಿಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಹಾರ್ದಿಕ್ ಒಆಂಡ್ಯ ಅವರು ಭಾರತದ ಟಿ20 ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಸೌರವ್ ಗಂಗೂಲಿ ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ಭಾರತದ ಮುಂದಿನ ನಾಯಕನಾಗುವ ಹಾದಿಯಲ್ಲಿದ್ದಾರೆ ಎಂಬುದನ್ನು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿಯೂ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿಉ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿದ್ದಾರೆ.
"ಐಪಿಎಲ್ ಆಟಗಾತರರನ್ನು ಪೋಷಿಸುವ ಅದ್ಭುತವಾದ ವೇದಿಕೆಯಾಗಿದೆ. ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ತಮ್ಮ ತಂಡವನ್ನು ಎಷ್ಟು ಅದ್ಭುತವಾಗಿ ಮುನ್ನಡೆಸಿದರು ಎಂಬುದನ್ನು ನಾವು ನೋಡಿದ್ದೇವೆ. ಭಾರತ ತಂಡವನ್ನು ಅವರು ಟಿ20 ಮಾದರಿಯಲ್ಲಿ ಮುನ್ನಡೆಸುವಂತಾಗಲು ಕೂಡ ಅದೇ ಕಾರಣ" ಎಂದಿದ್ದಾರೆ ಸೌರವ್ ಗಂಗೂಲಿ.
"ಐಪಿಎಲ್ನಲ್ಲಿ ತಂಡಗಳ ಸೋಲು ಹಾಗೂ ಗೆಲುವುಗಳನ್ನು ಕಡೆಗಳಿಸಲು ಸಾಧ್ಯವಿಲ್ಲ. ಯಾಕೆಂದರೆ ಅದು ಬಹಳ ಕಠಿಣವಾದ ಟೂರ್ನಮೆಂಟ್ ಆಗಿದೆ" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ಭಾರತ ತಂಡ ಎಂಎಸ್ ಧೋನಿ ನಾಯಕತ್ವದಲ್ಲಿ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಐಸಿಸಿ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಯುಎಇಯಲ್ಲಿ ನಡೆದ 2021ರ ಟಿ20 ವಿಶ್ವಕಪ್ನಲ್ಲಿ ಭಾರತವು ಸೂಪರ್-12 ಹಂತದಲ್ಲಿ ಹೊರಬಿದ್ದಿದ್ದರೆ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೋತು ಹೊರಬಿದ್ದಿತ್ತು.