
ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್ಮನ್, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಮಾಜಿ ಆಯ್ಕೆದಾರ ದೇವಾಂಗ್ ಗಾಂಧಿ ಭಾರತಕ್ಕೆ ತಂಡಗಳನ್ನು ಆರಿಸುವಾಗಿನ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ಪ್ರತೀ ಆಟಗಾರರೂ ಪ್ರಮುಖವೆನಿಸಿದಾಗ ಇಂತಿಷ್ಟೇ ಮಂದಿಯನ್ನು ಆರಿಸುವಾಗಿನ ಗೊಂದಲಗಳ ಬಗ್ಗೆ ದೇವಾಂಗ್ ಬಾಯ್ತೆರೆದಿದ್ದಾರೆ.
ಭಾರತ ತಂಡ ಆಯ್ಕೆ ಮಾಡುವಾಗಿನ ಅನುಭವಗಳನ್ನು ಹಂಚಿಕೊಂಡ ದೇವಾಂಗ್ ಗಾಂಧಿ, '2019ರ ವಿಶ್ವಕಪ್ನಲ್ಲಿ ಅಂಬಾಟಿ ರಾಯುಡು ಸೇರಿಸದಿದ್ದಿದ್ದು ಸರಿಯಲ್ಲ. ರಾಯುಡು ಅವರನ್ನು ಟೀಮ್ ಇಂಡಿಯಾದಲ್ಲಿ ಸೇರಿಸಬೇಕಿತ್ತು. ಅದೇ ಕಾರಣಕ್ಕೆ ಭಾರತ 4ನೇ ಸ್ಥಾನಕ್ಕೆ ಸೂಕ್ತ ಆಟಗಾರರಿಲ್ಲದೆ ಪರದಾಡಬೇಕಾಯ್ತು ಎಂದಿದ್ದಾರೆ.
ಕಳೆದ ವಿಶ್ವಕಪ್ ವೇಳೆ ರಾಯುಡು ತಂಡದಲ್ಲಿ ಕಾಣಿಸದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ದೇವಾಂಗ್, 'ಹೌದು, ಅದೊಂದು ತಪ್ಪು. ಆದರೆ ನಾವೂ ಕೂಡ ಮನುಷ್ಯರೆ. ಆ ಸಮಯದಲ್ಲಿ ತಂಡದ ಕಾಂಬಿನೇಶನ್ಗೆ ಆ ಆಟಗಾರ (ವಿಜಯ್ ಶಂಕರ್) ಸೂಕ್ತ ಆಗ್ತಾರೆ ಅಂದುಕೊಂಡಿದ್ದೆವು. ಆದರೆ ರಾಯುಡು ಇದ್ದಿದ್ದರೆ ತಂಡಕ್ಕೆ ಸಹಾಯವಾಗುತ್ತಿತ್ತು ಎಂದು ನಮಗೆ ಮತ್ತೆ ಮನವರಿಕೆಯಾಯ್ತು,' ಎಂದಿದ್ದಾರೆ.
ವಿಶ್ವಕಪ್ ವೇಳೆ ರಾಯುಡು ಭರವಸೆ ನೀಡುವಷ್ಟರ ಮಟ್ಟಿಗೆ ಫಾರ್ಮ್ನಲ್ಲಿದ್ದರು. ಆದರೆ ಪ್ರತಿಷ್ಠಿತ ಟೂರ್ನಿಗೆ ರಾಯುಡು ಅವರನ್ನು ಮೂಲೆಗುಂಪು ಮಾಡಲಾಗಿತ್ತು. ರಾಯುಡು ಮೀಸಲು ಆಟಗಾರರಾಗಿದ್ದರೂ ಅವರನ್ನು ತಂಡಕ್ಕೆ ಪರಿಗಣಿಸಲಿಲ್ಲ. ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಭಾರತ ಅಂತಿಮ ಕ್ಷಣ ಪ್ರಮುಖ ಪಂದ್ಯಗಳನ್ನೇ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು.